Loading...
Larger font
Smaller font
Copy
Print
Contents
ಪರ್ವತ ಪ್ರಸಂಗ - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಧರ್ಮಶಾಸ್ತ್ರದ ಪಾರಮಾರ್ಥಿಕತೆ (ಆಧ್ಯಾತ್ಮಿಕತೆ)

    “ತೆಗೆದುಹಾಕುವುದಕ್ಕೆ ಬಂದಿಲ್ಲ; ನೆರವೇರಿಸುವುದಕ್ಕೆ ಬಂದಿದ್ದೇನೆ.”

    ಸೀನಾಯಿ ಪರ್ವತದ ಮೇಲೆ, ಗುಡುಗು ಮತ್ತು ಉರಿಯುವ ಜ್ವಾಲೆಗಳ ನಡುವೆ ಪ್ರತ್ಯಕ್ಷನಾಗಿ ಧರ್ಮಶಾಸ್ತ್ರವನ್ನು—ಆಜ್ಞೆಗಳನ್ನು ಕೊಟ್ಟಾತನು ಕ್ರಿಸ್ತನೆ. ದೇವರ ಮಹಿಮೆಯು, ದಹಿಸುವ ಅಗ್ನಿಯಂತೆ, ಪರ್ವತ ಶಿಖರವನ್ನಾವರಿಸಿತು, ಮತ್ತು ಯೆಹೋವನ ಪ್ರಸನ್ನತೆಯಿಂದ ಪರ್ವತವು ಕಂಪಿಸಿತು. ಇಸ್ರಾಯೇಲರ ಸಮೂಹವೆಲ್ಲಾ ನೆಲದ ಮೇಲೆ ಬೋರ್ಲಬಿದ್ದು ಗಂಭೀರವಾಗಿ ಧರ್ಮಶಾಸ್ತ್ರದ ನೀತಿಬೋಧೆಯನ್ನು ಕೇಳುತ್ತಿದ್ದರು. ದನ್ಯವಾದಗಳ ಪರ್ವತಕ್ಕೆ ಎಂಥಾ ತಾರತಮ್ಯವಾದ ದೃಶ್ಯವಿದು! ಗ್ರೀಷ್ಮಋತುವಿನ ಶುಭ್ರವಾದ ಬಾನಡಿಯಲ್ಲಿ, ಪಕ್ಷಿಗಳ ಮಧುರಗಾನ ಹೊರತು ಆ ಪ್ರಶಾಂತ ವಾತಾವರಣವನ್ನು ಕಲಕುವ ಬೇರಾವ ಧ್ವನಿಯೂ ಇಲ್ಲದ ವೇಳೆಯಲ್ಲಿ, ಯೇಸುಸ್ವಾಮಿಯು ತನ್ನ ಸಾಮ್ರಾಜ್ಯದ ಮೂಲತತ್ವಗಳನ್ನು ವ್ಯಕ್ತಪಡಿಸಿದನು. ಅಂದು ಮಮತೆಯ ಗಂಭೀರವಾಣಿಯಲ್ಲಿ ಬೋಧಿಸಿದಾತನು, ಸೀನಾಯಿ ಪರ್ವತದ ಮೇಲೆ ಪ್ರಕಟವಾದ ಧರ್ಮಶಾಸ್ತ್ರದ ಮೂಲತತ್ವಗಳನ್ನು ವಿವರಿಸುತ್ತಿದ್ದನು.MBK 50.1

    ಧರ್ಮಶಾಸ್ತ್ರ ಪ್ರಕಟಿಸಲ್ಪಟ್ಟಾಗ, ಇಸ್ರಾಯೇಲರು, ಐಗುಪ್ತದ ದೀರ್ಘಗಲಾಮತ್ವದಿಂದ ನೀತಿಭ್ರಷ್ಟರಾಗಿದ್ದ ಪ್ರಯುಕ್ತ, ದೇವರೆ ಪ್ರಭಾವ ಮತ್ತು ಘನತೆಯ ವಿಷಯದಲ್ಲಿ ಮನದಟ್ಟು ಮಾಡಲ್ಪಡಬೇಕಾದ ಅವಶ್ಯವಿತ್ತು. ಹೀಗಿದ್ದರೂ ಆತನು ಅವರಿಗೆ ತನ್ನನ್ನು ಪ್ರೀತಿಯುಳ್ಳ ದೇವರೆಂದು ವ್ಯಕ್ತಪಡಿಸಿದನು.MBK 50.2

    ಯೆಹೋವನು ಸೀನಾಯಿ ಬೆಟ್ಟದಿಂದ ಬಂದು,
    ಸೇಯೀರ್ ಎಂಬ ಬೆಟ್ಟದ ಸೀಮೆಯಿಂದ ಪ್ರಕಾಶಿಸಿ,
    ಪಾರ್ರಾ ಪರ್ವತದಿಂದ ಹೊಳೆದು,
    ಲಕ್ಷಾಂತರ ಪರಿಶುದ್ಧ ದೂತರ ಮಧ್ಯದಿಮ್ದ ಅವರಿಗೋಸ್ಕರ
    ದಯಮಾಡಿದನು;
    ಆತನ ಬಲಪಾರ್ಶ್ವದಲ್ಲಿ ಅಗ್ನಿ ಸದೃಶವಾದ ಧರ್ಮಶಾಸ್ತ್ರವಿತ್ತು.
    ಆತನು ತನ್ನ ಜನರನ್ನು ಪ್ರೀತಿಸುತ್ತಾನೆ;
    [ಯೆಹೋವನೇ,] ನಿನ್ನ ಭಕ್ತರೆಲ್ಲರೂ ನಿನ್ನ ಆಶ್ರಯದಲ್ಲಿಯೇ ಇದ್ದಾರೆ;
    ನಿನ್ನ ಚರಣ ಸನ್ನಿಧಾನದಲ್ಲೇ ಕೂತಿರುವರು; ನೀನು ಹೇಳುವ ಆಜ್ಞೆಗಳನ್ನು ಶಿರಸಾವಹಿಸುವರು. ಧರ್ಮೋಪದೇಶಕಾಂಡ 33: 2, 3.
    MBK 50.3

    ಯುಗಯುಗಾಂತರಕ್ಕೂ ಪಿತ್ರಾರ್ಜಿತ ಅಮೂಲ್ಯ ಸಂಪತ್ತಿನಂತೆ ಭದ್ರವಾಗಿಡಲ್ಪಟ್ಟಿರುವ ಅದ್ಭುತವಾರ್ತೆಗಳಲ್ಲಿ ದೇವರು ತನ್ನ ಪ್ರಭಾವವನ್ನು ವ್ಯಕ್ತಪಡಿಸಿದ್ದು ತನ್ನ ಭಕ್ತನಾದ ಮೋಶೆಗೆ: “ಯೆಹೋವ, ಯೆಹೋವ ಕನಿಕರವೂ ದಯೆಯೂ ಉಳ್ಳ ದೇವರು; ದೀರ್ಘಶಾಂತನೂ ಪ್ರೀತಿಯೂ ನಂಬಿಕೆಯೂ ಉಳ್ಳವನು; ಸಾವಿರಾರು ತಲೆಗಳವರೆಗೆ ದಯೆತೋರಿಸುವವನು; ದೋಷಾಪರಾಧಗಳನ್ನು ಕ್ಷಮಿಸುವವನು.” ವಿಮೋಚನಕಾಂಡ 34: 6, 7.MBK 51.1

    ಸೀನಾಯಿ ಪರ್ವತದ ಮೇಲೆ ಕೊಡಲ್ಪಟ್ಟ ಧರ್ಮಶಾಸ್ತ್ರವು ಪ್ರೀತಿಯ ಮೂಲತತ್ವದ ನಿರೂಪಣೆಯಾಗಿತ್ತು, ಭೂಮಿಗೆ ಪರಲೋಕದ ಧರ್ಮಶಾಸ್ತ್ರದ ಪ್ರಕಟನೆಯಾಗಿತ್ತು. ಒಬ್ಬ ಮಧ್ಯಸ್ತನ ಹಸ್ತಗಳಿಂದ ದೀಕ್ಷೆಗೊಂಡು, - ಯಾವಾತನ ಶಕ್ತಿಯಿಂದ ಮಾನವರ ಹೃದಯಗಳು ಅದರ ಮೂಲತತ್ವದೊಡನೆ ಸಂಮಿಲನವಾಗುತ್ತವೋ ಆತನಿಂದ ನುಡಿಯಲ್ಪಟ್ಟವು. “ನೀವು ನನಗೆ ಪರಿಶುದ್ಧ ಜನರಾಗಿರಬೇಕು” ವಿಮೋಚನಕಾಂಡ 22: 3, ಎಂದು ಇಸ್ರಾಯೇಲರಿಗೆ ಆತನು ಹೇಳಿದ್ದರಲ್ಲಿ ದೇವರು ಧರ್ಮಶಾಸ್ತ್ರದ ಉದ್ದೇಶವನ್ನು ವ್ಯಕ್ತಪಡಿಸಿದ್ದಾನೆ.MBK 51.2

    ಆದರೆ ಇಸ್ರಾಯೇಲರು ಧರ್ಮಶಾಸ್ತ್ರದ ಆಧ್ಯಾತ್ಮಿಕತೆಯನ್ನು ಗ್ರಹಿಸಲಿಲ್ಲ, ಮತ್ತು ಪದೇ ಪದೇ ಅವರ ವಿಧೇಯತೆಯ ತೋರ್ಕೆಯು, ಪ್ರೀತಿಯ ಪರಮಾಧಿಕಾರಕ್ಕೆ ತಮ್ಮ ಹೃದಯಗಳಾನ್ನೊಪ್ಪಿಸುವ ಬದಲು, ಸಂಪ್ರದಾಯ ಮತ್ತು ಕರ್ಮಾಚಾರಗಳ ಆಚರಣೆಯಾಗಿತ್ತು. ಯೇಸು ಸ್ವಾಮಿಯ ಸೌಜನ್ಯದ ಮೂಲಕವೂ ಮತ್ತು ಸೇವೆಯ ಮೂಲಕವೂ ದೇವರ ಪರಿಶಿದ್ಧವೂ ದಯಾಪರತೆಯೂ ಮತ್ತು ಪಿತೃ ಪ್ರಾಯವೂ ಆದ ಶೀಲಸ್ವಭಾವಗಳನ್ನು ಪ್ರತಿಬಿಂಬಿಸಿದಾಗಲೂ ಮತ್ತು ಸಾಂಪ್ರದಾಯಿಕ ಮತಾವಲಂಬನೆಯ ಅಪ್ರಯೋಜಕತೆಯನ್ನು ನಿರೂಪಿಸಿದಾಗಲೂ, ಯೆಹೂದ್ಯರ ಅಧಿಕಾರಿಗಳು ಆತನ ವಾಕ್ಯಗಳನ್ನು ಸ್ವೀಕರಿಸಲೂ ಅಥವಾ ಗ್ರಹಿಸಲೂ ಇಲ್ಲ. ಆತನು ಧರ್ಮಶಾಸ್ತ್ರದ ಅಗತ್ಯ ಕರ್ತವ್ಯವನ್ನು ಅಲ್ಪವೆಂದೆಣಿಸುತ್ತಾನೆಂದು ನೆನಸಿದರು; ಮತ್ತು ಆತನು ಅವರ ಮುಂದೆ ದೈವನಿಯಮಿತವಾದ ಅವರ ಸೇವೆಯ ಪ್ರಾಣವಾದ ಸತ್ಯಾಂಶಗಳನ್ನು ಸುರಿದಾಗಲೂ ಅವರು ಬಾಹ್ಯ್ಆಚಾರಗಳನ್ನೇ ಅನುಸರಿಸುವವರಾಗಿ, ಧರ್ಮಶಾಸ್ತ್ರವನ್ನು ಉರುಳಿಸಿಬಿಡಲು ಪ್ರಯತ್ನಿಸುತ್ತಾನೆಂದು ಆತನನ್ನು ದೂಷಿಸಿದರು.MBK 51.3

    ಕ್ರಿಸ್ತನ ವಾಕ್ಯಗಳು ನಿಶ್ಚಲತೆಯಿಂದ ನುಡಿಯಲ್ಪಟ್ಟುವಾದರೂ, ಜನರ ಹೃದಯಗಳನ್ನು ಉದ್ರೇಕಿಸುವ ಆಸಕ್ತಿ ಪ್ರತಾಪಗಳಿಂದ ಕೂಡಿ ವ್ಯಕ್ತಪಡಿಸಲ್ಪಟ್ಟವು. ಶಾಸ್ತ್ರಿಗಳ ನಿರ್ಜೀವ ಸಂಪ್ರದಾಯಗಳ ಮತ್ತು ನಿರ್ಬಂಧಗಳ ಪುನರಾವೃತ್ತಿಯನ್ನು ಕೇಳಲಿಚ್ಛಿಸಿದರು, ಆದರೆ ನಿಷ್ಫಲವಾಯಿತು. “ಆತನು ಅವರ ಶಾಸ್ತ್ರಿಗಳಂತೆ ಉಪದೇಶ ಮಾಡದೆ ಅಧಿಕಾರವಿದ್ದವನಂತೆ ಅವರಿಗೆ ಉಪದೇಶ ಮಾಡುತ್ತಿದ್ದು” (ಮತ್ತಾಯ 7: 29) ದನ್ನು ನೋಡಿ ಆಶ್ಚರ್ಯಪಟ್ಟರು. ಪರಿಸಾಯರು ತಾವು ಉಪದೇಶಿಸಿದ ರೀತಿಗೂ ಕ್ರಿಸ್ತನು ಉಪದೇಶಿಸಿದ ರೀತಿಗೂ ಇರುವ ತಾರತಮ್ಯವನ್ನು ಮನಗಂಡರು. ಪ್ರಭಾವವೂ, ಪರಿಶುದ್ಧವೂ ಮತ್ತು ರಮಣೀಯವೂ ಉಳ್ಳ ಸತ್ಯದ ಗಂಭೀರ ಮತ್ತು ಸೌಮ್ಯ ಪರಿಣಾಮವು ಅನೇಕರ ಮನಸ್ಸಿನಲ್ಲಿ ಅಚಲವಾಗಿ ಭದ್ರಗೊಂಡಿರುವುದನ್ನು ಗ್ರಹಿಸಿದರು. ರಕ್ಷಕನ ದೈವಪ್ರೀತಿಯೂ ಮತ್ತು ಸೌಮ್ಯತೆಯೂ ಮನುಷ್ಯರ ಹೃದಯಗಳನ್ನು ಆತನೆಡೆಗೆ ಸೆಳೆದುವು, ಶಾಸ್ತ್ರಿಗಳು ಇದುವರೆವಿಗೂ ತಾವು ಜನರಿಗೆ ಕೊಟ್ಟ ಬೋಧನೆಯ ರೀತಿಯೆಲ್ಲಾ ಆತನ ಬೋಧನೆಯ ಎದುರಿನಲ್ಲಿ ನಿಷ್ಪ್ರಯೋಜಕವಾದುವೆಂದು ಮನಗಂಡರು. ಅವರ ಆತ್ಮತೃಪ್ತಿಗಾಗಿದ್ದ ದುರಭಿಮಾನ ಮತ್ತು ಬಹಿಷ್ಕಾರದ ನೀತಿಯನ್ನೊಳಗೊಂಡ ಪ್ರತಿಬಂಧಕವನ್ನು ಕ್ರಿಸ್ತನು ಕಿತ್ತುಹಾಕಲಿದ್ದನು; ಮತ್ತು ಈತನನ್ನು ಹೀಗೆಯೇ ಬಿಟ್ಟರೆ, ಎಲ್ಲಾ ಜನರನ್ನೂ ಅವರ ಕಡೆಯಿಂದ ತನ್ನ ಕಡೆಗೆ ಎಳೆದುಕೊಳ್ಳುವನೆಂದು ಅವರು ಭಯಪಟ್ಟರು. ಆದುದರಿಂದ ಅವರು ದೃಢಮನಸ್ಸಿನಿಂದ ಪ್ರತಿಕೂಲರಾಗಿ ಆತನನ್ನು ಹಿಂಬಾಲಿಸುತ್ತಾ, ಆತನ ವಿಷಯವಾಗಿ ಸಮೂಹದಲ್ಲಿ ಅನಾದರಣೆಯುಂಟಾಗುವಂತೆ ಮಾಡಲು ಸಂದರ್ಭವನ್ನು ಹೊಂಚುಕಾಯುತ್ತಾ, ಹೀಗೆ ಸನ್ಹೆದ್ರಿಮ್ ಸಂಘವು ಆತನ ಮೇಲೆ ದೋಷಾರೋಪಿಸಿ ಆತನನ್ನು ಮರಣಾಕ್ಕೆ ಒಪ್ಪಿಸಲು ಸಾಧ್ಯವಾಗುವಂತೆ ನಿರೀಕ್ಷಿಸುತ್ತಿದ್ದರು.MBK 52.1

    ಪರ್ವತದ ಮೇಲೆ, ಗೂಢಾಚಾರರು ಯೇಸುವನ್ನು ಬಹು ಎಚ್ಚರಿಕೆಯಿಂದ ಹೊಂಚು ಕಾಯುತ್ತಿದ್ದರು; ಆತನು ನೀತಿಯ ತತ್ವಗಳನ್ನು ನಿರೂಪಿಸುತ್ತಿರುವಾಗ ಫರಿಸಾಯರು ಆತನ ಉಪದೇಶವು ದೇವರು ಸೀನಾಯಿ ಪರ್ವತದ ಮೇಲೆ ಕೊಟ್ಟ ವಿಧಿಗಳಿಗೆ ವ್ಯತರಿಕ್ತವಾಗಿವೆ ಎಂದು ಗುಸುಗುಟ್ಟಲಾರಂಭಿಸಿದರು. ಕ್ರಿಸ್ತನು ಮೋಶೆಯು ವಿಧಿಸಿದ್ದ ಮತಸಂಪ್ರದಾಯಗಳ ಮೇಲಣ ನಂಬಿಕೆಯನ್ನು ನಿಲ್ಲಿಸಲು ಹೇತುವಾದ ಯಾವುದನ್ನೂ ರಕ್ಷಕನು ಹೇಳಲಿಲ್ಲ; ಯಾಕಂದರೆ ಇಸ್ರಾಯೇಲರ ಮಹಾ ನಾಯಕನು ಅವರಿಗೆ ನಿವೇಧಿಸಿದ ದೈವಜ್ಯೋತಿಯ ಪ್ರತಿಯೊಂದು ಕಿರಣವೂ ಕ್ರಿಸ್ತನಿಂದ ಹೊಂದಿದುದಾಗಿತ್ತು. ಅನೇಕರು ತಮ್ಮ ಹೃದಯಗಳಲ್ಲಿ ಆತನು ಧರ್ಮಶಾಸ್ತ್ರವನ್ನು ತೆಗೆದುಹಾಕಲಿಕ್ಕೆ ಬಂದಿದ್ದಾನೆಂದು ನೆನಸುತ್ತಾರೆ, ಆದರೆ ಯೇಸುವು ಸಂದೇಹ ಪಡಲವಕಾಶವಿಲ್ಲದ ನುಡಿಯಲ್ಲಿ ದೈವನಿಯಮಗಳ ವಿಷಯದಲ್ಲಿ ಆತನ ಭಾವವನ್ನು ವಿಷದವಾಗಿ ತಿಳಿಸಿದ್ದಾನೆ. “ಮೋಶೆಯ ಧರ್ಮಶಾಸ್ತ್ರವನ್ನಾಗಲಿ ಪ್ರವಾದಿಗಳ ವಚನಗಳನ್ನಾಗಲಿ ತೆಗೆದುಹಾಕಲಿಕ್ಕೆ ನಾನು ಬಂದೆನೆಂದು ನೆನಸಬೇಡಿರಿ” ಎಂದು ಆತನು ಹೇಳಿದನು.MBK 52.2

    ಮಾನವರ ಸೃಷ್ಟಿಕರ್ತನೂ, ಧರ್ಮಶಾಸ್ತ್ರವನ್ನು ಕೊಟ್ಟಾತನೇ, ಅದರ ತತ್ವಗಳನ್ನು ಬದಿಗೊತ್ತುವುದು ತನ್ನ ಉದ್ದೇಶವಲ್ಲವೆಂದು ಹೇಳುತ್ತಾನೆ. ಪ್ರಕೃತಿಯಲ್ಲಿರುವ ಸಕಲವೂ, ಸೂರ್ಯನ ಕಿರಣದಲ್ಲಿರುವ ಅಣುರೇಣು ಮೊದಲುಗೊಂಡು ಮೇಲ್ಲೋಕಗಳೂ, ಧರ್ಮಶಾಸ್ತ್ರಾಧೀನವಾಗಿವೆ. ಈ ಆಜ್ಞೆಗಳಿಗೆ ವಿಧೇಯವಾಗಿರುವುದೇ ಪ್ರಾಕೃತಿಕ ಲೋಕದ ಕ್ರಮ ಮತ್ತು ಸಾಮರಸ್ಯಕ್ಕೆ ಆಧಾರವಾಗಿದೆ. ಹಾಗೆಯೇ ಎಲ್ಲಾ ಅರಿವುಳ್ಳ ವಸ್ತುಗಳ ಜೀವನವನ್ನು ಅಂಕೆಯಲ್ಲಿಡುವ ನೀತಿಯ ಮಹಾ ತತ್ವಗಳಿವೆ. ಮತ್ತು ಪ್ರಪಂಚದ ಕ್ಷೇಮವು ಈ ತತ್ವಗಳಿಗೆ ಅನುವರ್ತನೆಯಿಂದಿರುವುದರ ಮೇಲೆಯೇ ಆತುಕೊಂಡಿದೆ. ಈ ಭೂಮಿಯು ಸ್ಥಾಪಿಸಲ್ಪಡಲು ಮುನ್ನ ದೇವರ ಆಜ್ಞೆಯು ಇತ್ತು. ದೇವದೂತರು ಅದರ ತತ್ವಗಳಿಂದ ನಿರ್ವಹಿಸಲ್ಪ್ಡುತ್ತಿದ್ದಾರೆ, ಮತ್ತು ಭೂಮಿಯು ಪರಲೋಕದೊಡನೆ ಹೊಂದಿಕೆಯುಳ್ಳದ್ದಾಗಿರುವಂತೆ, ಮನುಷ್ಯರೂ ಸಹ ದೈವಕಟ್ಟಳೆಗಳಿಗೆ ವಿಧೇಯರಾಗಿರಬೇಕು. “ಮುಂಜಾನೆ ನಕ್ಷತ್ರಗಳು ಒಟ್ಟಾಗಿ ಉತ್ಸಾಹಧ್ವನಿಯೆತ್ತುತ್ತಾ ದೇವಕುಮಾರರೆಲ್ಲರೂ ಆನಂದಘೋಷ ಮಾಡುತ್ತಾ ಇರಲು” ಯೋಬ 38: 6, ಏರ್ದೆ ತೋಟದಲ್ಲಿ ಮನುಷ್ಯನಿಗೆ ಧರ್ಮಶಾಸ್ತ್ರದ ತತ್ವಗಳನ್ನು ಕ್ರಿಸ್ತನು ವ್ಯಕ್ತಪಡಿಸಿದನು. ಭೂಮಿಯ ಮೇಲೆ ಕ್ರಿಸ್ತನ ನಿಯೋಗವು ಧರ್ಮಶಾಸ್ತ್ರವನ್ನು ರದ್ದುಮಾಡುವುದಾಗಿರಲಿಲ್ಲ, ಆದರೆ ತನ್ನ ಕೃಪೆಯಿಂದ ಮನುಷ್ಯನನ್ನು ಅದರ ಮೂಲತತ್ವಗಳಿಗೆ ವಿಧೇಯನನ್ನಾಗಿ ಮಾಡುವುದೇ ಆಗಿತ್ತು.MBK 53.1

    ಯೇಸುಸ್ವಾಮಿಯ ವಾಕ್ಯಗಳನ್ನು ಪರ್ವತದ ಮೇಲೆ ಕೇಳಿದ ಪ್ರಿಯಶಿಷ್ಯನು, ಪವಿತ್ರಾತ್ಮನ ಪ್ರೇರಣೆಯಿಂದ ಅನೇಕ ವರ್ಷಗಳ ನಂತರ ಬರೆಯುತ್ತಾ, ಧರ್ಮಶಾಸ್ತ್ರವು ನಿರಂತರವೂ ಕೈಕೊಳ್ಳಲು ಯೋಗ್ಯವಾದುದೆಂದು ಹೇಳುತ್ತಾನೆ. “ದೇವರ ಆಜ್ಞೆಗಳನ್ನು ಮೀರುವುದೇ ಪಾಪ, ಪಾಪವನ್ನು ಮಾಡುವವನು ಧರ್ಮಶಾಸ್ತ್ರವನ್ನು ಮೀರುವವನಾಗಿದ್ದಾನೆ.” 1 ಯೋಹಾನ 3: 4, ಎಂದು ಹೇಳಿದ್ದಾನೆ, ಮತ್ತು ತಾನು ಸೂಚಿಸಿದ ಧರ್ಮಶಾಸ್ತ್ರವು “ಮೊದಲಿನಿಂದಲೂ” ಅವರಿಗಿದ್ದ “ಹಳೆ ಯ ಅಪ್ಪಣೆಯಾಗಿದೆ” 1 ಯೋಹಾನ 2: 7 ಎಂದು ಪರಿಷ್ಕಾರವಾಗಿ ತಿಳಿಸಿದ್ದಾನೆ. ಸೃಷ್ಟಿಯಲ್ಲಿ ನೆಲೆಸಿದ್ದು ತರುವಾಯ ಸೀನಾಯಿ ಪರ್ವತದ ಮೇಲೆ ಮರಳಿ ಹೇಳಲ್ಪಟ್ಟ ಧರ್ಮಶಾಸ್ತ್ರದ ವಿಚಾರವಾಗಿಯೇ ಹೇಳುತ್ತಾನೆ.MBK 53.2

    ಯೇಸುವು ಧರ್ಮಶಾಸ್ತ್ರದ ವಿಷಯದಲ್ಲಿ ಮಾತಾಡುತ್ತಾ “ತೆಗೆದುಹಾಕುವುದಕ್ಕೆ ಬಂದಿಲ್ಲ ನೆರೇರಿಸುವುದಕ್ಕೆ ಬಂದಿದ್ದೇನೆ” ಎಂದು ಹೇಳಿದನು. ಇಲ್ಲಿ ಆತನು “ನೆರವೇರಿಸುವುದಕ್ಕೆ” ಎಂಬ ಪದವನ್ನು ತಾನು ಸ್ನಾನಿಕನಾದ ಯೋಹಾನನಿಗೆ ವ್ಯಕ್ತಪಡಿಸಿದ ತನ್ನ ಉದ್ದೇಶದಲ್ಲಿ ಅಂದರೆ “ನಾವು ಎಲ್ಲಾ ಧರ್ಮವನ್ನೂ ನೆರವೇರಿಸತಕ್ಕದ್ದಾಗಿದೆ” (ಮತ್ತಾಯ 3: 15), ಎಂಬ ಅರ್ಥದಲ್ಲಿಯೇ ಹೇಳಿದನು; ಅಂದರೆ ಧರ್ಮಶಾಸ್ತ್ರದ ಅಗತ್ಯ ವಿಧಿಗಳನ್ನು ಭರ್ತಿಮಾಡಿ, ದೇವರ ಚಿತ್ತಕ್ಕೆ ಪರಿಪೂರ್ಣ ಅನುವರ್ತನೆಯ ಮಾದರಿಯನ್ನು ತೋರುವುದೇ ಆತನ ಕರ್ತವ್ಯವಾಗಿತ್ತು. “ಧರ್ಮೋಪದೇಶವನ್ನು ಘನಪಡಿಸಿ ಮಹತ್ತಿಗೆ ತರಬೇಕಾದದು” ಯೆಶಾಯ 42: 21, ಆತನ ಕರ್ತವ್ಯವಾಗಿತ್ತು. ಆತನು ಧರ್ಮಶಾಸ್ತ್ರದ ಪಾರಮಾರ್ಥಿಕ ಸ್ವಭಾವವನ್ನೂ ಅದರ ಬಹುದೂರ ವ್ಯಾಪನೆಯುಳ್ಳ ಮೂಲತತ್ವಗಳನ್ನೂ ವ್ಯಕ್ತಪಡಿಸಿ, ಇದು ನಿರಂತರವೂ ಕೈಕೊಳ್ಳಲು ಯೋಗ್ಯವಾದುದೆಂದು ವಿಷದಪಡಿಸಬೇಕಾಗಿತ್ತು.MBK 54.1

    ಭೂಮಿಯ ಮೇಲಣ ಮನುಷ್ಯರೊಳಗಿರುವ ಅತಿ ಶ್ರೇಷ್ಠರೂ ಮತ್ತು ಸಂಭಾವಿತರೂ ಕ್ರಿಸ್ತನ ಸೌಜನ್ಯದ ದೈವರಮಣೀಯತೆಯ ಸೂಕ್ಷ್ಮಪ್ರತಿಬಿಂಬವಷ್ಟೆ; ಸಲೋಮೋನನು ಪವಿತ್ರಾತ್ಮನ ಪ್ರೇರಣೆಯಿಂದ ಆತನ ವಿಷಯದಲ್ಲಿ “ಅವನು ಹತ್ತುಸಾವಿರ ಜನರಲ್ಲಿ ಧ್ವಜಪ್ರಾಯನು.....ಹೌದು, ಅವನು ಸರ್ವಾಂಗದಲ್ಲಿಯೂ ಮನೋಹರನು” ಪರಮಗೀತ 5:1೦-16, ಎಂದು ಬರೆದಿದ್ದಾನೆ. ದಾವೀದನು ಆತನನ್ನು ದಿವ್ಯದರ್ಷನದಲ್ಲಿ ಕಂಡು, “ನೀನು ಎಲ್ಲಾ ಮನುಷ್ಯರಿಗಿಂತ ಅತಿ ಸುಂದರನು” ಕೀರ್ತನೆ 45: 2, ಎಂದು ಹೇಳಿದ್ದಾನೆ. ಯೇಸುವು ತಂದೆಯ ಸತ್ಯಮೂರ್ತಿಯೂ ಮತ್ತು ಆತನ ಮಹಿಮೆಯ ಪ್ರತಿಬಿಂಬವೂ ಆಗಿದ್ದಾನೆ. ಸ್ವಾರ್ಥತ್ಯಾಗಿಯಾದ ರಕ್ಷಕನು ತನ್ನ ಪ್ರೀತಿಯ ಭೂಯಾತ್ರೆಯಲ್ಲೆಲ್ಲಾ, ದೇವರ ಧರ್ಮಶಾಸ್ತ್ರದ ಗುಣಗಳ ಸಜೀವ ಬಿಂಬವಾಗಿದ್ದನು. ಆತನ ಜೀವಮಾನದಲ್ಲಿ, ಸ್ವರ್ಗಸಂಜಾತ ಪ್ರೀತಿಗೂ ಮತ್ತು ಕ್ರೈಸ್ತೋಚಿತ ತತ್ವಗಳಿಗೂ ಅನಂತ ಸೌಶೀಲ್ಯವುಳ್ಳ ಧರ್ಮಶಾಸ್ತ್ರವೇ ಆಧಾರವೆಂದು ಆತನು ವ್ಯಕ್ತಪಡಿಸಿದನು.MBK 54.2

    “ಆಕಾಶವೂ ಭೂಮಿಯೂ ಅಳಿದುಹೋಗುವ ತನಕ ಧರ್ಮಶಾಸ್ತ್ರವೆಲ್ಲಾ ನೆರವೇರಿದ ಹೊರತು ಅದರೊಳಗಿಂದ ಒಂದು ಸೊನ್ನೆಯಾದರೂ ಒಂದು ಗುಡುಸಾದರೂ ಅಳಿದು ಹೋಗಲಾರದು.” ಮತ್ತಾಯ 5: 18, ಎಂದು ಕ್ರಿಸ್ತನು ಹೇಳಿ ದನು. ಧರ್ಮಶಾಸ್ತ್ರಕ್ಕೆ ತನ್ನ ಸ್ವಂತ ವಿಧೇಯತೆಯಿಂದ, ಕ್ರಿಸ್ತನು ಅದರ ನಿರ್ಮಿಕಲ್ಪವಾದ ಗುಣಗಳಿಗೆ ಸಾಕ್ಷ್ಯವಿತ್ತು, ತನ್ನ ಕೃಪೆಯ ಮೂಲಕವಾಗಿ ಆದಾಮನ ಪ್ರತಿಯೊಬ್ಬ ಮಗನೂ ಮಗಳೂ ಸಹ ಕೈಕೊಳ್ಳಬಹುದೆಂದು ಶ್ರುತಪಡಿಸಿದನು. ಪರ್ವತಮೇಲೆ ಪ್ರಸಂಗಿಸುತ್ತಾ, ಧರ್ಮಶಾಸ್ತ್ರವೆಲ್ಲಾ ನೆರವೇರಿದ ಹೊರತು ಅದರ ಒಂದು ಗುಡುಸೂ ಬಿದ್ದು ಹೋಗುವುದಿಲ್ಲವೆಂದು ಹೇಳಿದನು,-ಎಲ್ಲವೂ, ಮಾನವರಿಗೂ ಮತ್ತು ರಕ್ಷಣೆಯ ಯೋಜನೆಗೂ ಸಂಬಂಧಿಸಿದ ಎಲ್ಲಾ ಕಾರ್ಯಗಳೂ, ಧರ್ಮಶಾಸ್ತ್ರವು ರದ್ದಾಗುವುದೆಂದು ಆತನು ಹೇಳಲಿಲ್ಲ, ಆದರೆ ಮನುಷ್ಯನ ಜೀವನದ ಅತ್ಯಂತ ತುತ್ತತುದಿಯವರೆಗೂ ದೃಷ್ಟಿಯನ್ನಿಟ್ಟು, ಈ ನೆಲೆಯನ್ನು ಮುಟ್ಟುವತನಕ ಧರ್ಮಶಾಸ್ತ್ರವು ತನ್ನ ವಿಧಾಯಕ ಶಕ್ತಿಯನ್ನು ಉಳಿಸಿಕೊಂಡಿರುವುದು, ಆದುದರಿಂದ ಧರ್ಮಶಾಸ್ತ್ರದ ಅಧಿಕಾರವನ್ನು ರದ್ದುಮಾಡುವುದೇ ಆತನ ಉದ್ದೇಶವೆಂದು ಯಾರೂ ಯೋಚಿಸಕಾಡದು, ಭೂಮ್ಯಾಕಾಶಗಳು ಇರುವಷ್ಟು ಕಾಲವೂ, ದೇವರ ಧರ್ಮಶಾಸ್ತ್ರದ ಪರಿಶುದ್ಧ ನಿಯಮಗಳು ಇರುವುವು. “ಆತನ ನೀತಿಯು ದಿವ್ಯ ಪರ್ವತಗಳಂತೆ” (ಕೀರ್ತನೆ 36:6), ಆಶೀರ್ವಾದದ ಬುಗ್ಗೆಯಾಗಿ, ಭೂಮಿಯನ್ನು ಚೇತರಿಸಲು ಹೊನಲನ್ನು ಧಾರೆಯಾಗಿ ಕಳುಹಿಸುವುದು.MBK 54.3

    ಯೆಹೋವನ ಧರ್ಮಶಾಸ್ತ್ರವು ಪರಿಪೂರ್ಣವೂ ರದ್ದಾಗಲಾರದ್ದೂ ಆಗಿರುವುದರಿಂದ ಪಾಪಿಗಳಾದ ಮನುಷ್ಯರು ತಮ್ಮ ಶಕ್ತಿಯಿಂದಲೇ ಅದರ ಕೋರಿಕೆಗಳನ್ನು ಈಡೇರಿಸಲು ಸಾಧ್ಯವಿಲ್ಲ. ಈ ಕಾರಣದಿಂದಲೇ ಕ್ರಿಸ್ತ ಯೇಸುವು ನಮ್ಮ ರಕ್ಷಕನಾಗಿ ಬಂದನು. ಮನುಷ್ಯರನ್ನು ದೈವಸ್ವಭಾವದೊಡನೆ ಭಾಗಿಗಳನ್ನಾಗಿ ಮಾಡಿ, ಪರಲೋಕದ ಧರ್ಮಶಾಸ್ತ್ರದ ತತ್ವಗಳೊಡನೆ ಅವರನ್ನು ಐಕ್ಯಪಡಿಸುವುದೇ ಆತನ ಸೇವೆಯಾಗಿತ್ತು. ನಾವು ನಮ್ಮ ಪಾಪಗಳನ್ನು ತೊರೆದು, ಕ್ರಿಸ್ತನನ್ನು ನಮ್ಮ ರಕ್ಷಕನನ್ನಾಗಿ ಅಂಗೀಕರಿಸಿಕೊಂಡರೆ, ಧರ್ಮಶಾಸ್ತ್ರವು ಘನಪಡಿಸಲ್ಪಡುತ್ತದೆ. “ಹಾಗಾದರೆ ನಂಬಿಕೆಯಿಂದ ಧರ್ಮಪ್ರಮಾಣವನ್ನು ನಿರರ್ಥಕ ಮಾಡುತ್ತೇವೋ? ಎಂದಿಗೂ ಇಲ್ಲ. ಧರ್ಮಪ್ರಮಾಣವನ್ನು ಸ್ಥಿರಪಡಿಸುತ್ತೇವೆ.” ರೋಮಾಯ 3: 31, ಎಂದು ಅಪೋಸ್ತಲನಾದ ಪೌಲನು ಹೇಳುತ್ತಾನೆ.MBK 55.1

    ಹೊಸ ಒಡಂಬಡಿಕೆಯ ವಾಗ್ದಾನವೇನಂದರೆ, “ನನ್ನ ಆಜ್ಞೆಗಳನ್ನು ಅವರ ಹೃದಯದಲ್ಲಿ ಇಡುವೆನು, ಅವರ ಮನಸ್ಸಿನ ಮೇಲೆ ಅವುಗಳನ್ನು ಬರೆಯುವೆನು” ಇಬ್ರಿಯ 1೦: 16. ಧರ್ಮಶಾಸ್ತ್ರದಲ್ಲಿ ಕ್ರಿಸ್ತನು ಲೋಕದ ಪಾಪಗಳನ್ನು ನಿವಾರಣೆ ಮಾಡುವ ಯಜ್ಞದ ಕುರಿಯಾಗಿ ಬರಬೇಕೆಂದು ತೋರಿಸಿದ ಛಾಯೆಯು ಆತನ ಮರಣದಲ್ಲಿ ರದ್ದಾಯಿತಾದರೂ, ದಶಾಜ್ಞೆಯಲ್ಲಿ ಮೂರ್ತೀಭವಿಸಿರುವ ನೀತಿ ಯ ಮೂಲತತ್ವಗಳು ಸನಾತನ ಸಿಂಹಾಸನದಂತೆ ಎಂದೂ ರದ್ದಾಗದೆ ಇರುವುವು. ಆಜ್ಞೆಗಳಲ್ಲಿ ಒಂದಾದರೂ ವರ್ಜಿಸಲ್ಪಡಲಿಲ್ಲ, ಒಂದು ಸೊನ್ನೆಯಾದರೂ, ಗುಡುಸಾದರೂ ಬದಲಾಯಿಸಲ್ಪಡಲಿಲ್ಲ. ಪರದೈಸಿನಲ್ಲಿ ಮನುಷ್ಯನಿಗೆ ಜೀವದಾಯಕವಾದ ಮಹಾ ಧರ್ಮಪ್ರಮಾಣವಾಗಿ ಕೊಡಲ್ಪಟ್ಟ ಮೂಲತತ್ವಗಳು ಜೀರ್ಣೋದ್ಧಾರವಾದ ಪರದೈಸಿನಲ್ಲಿಯೂ ಎಂದೂ ರದ್ದಾಗದೆ ಇರುವುದು. ಭೂಮಿಯ ಮೇಲೆ ಏರ್ಡೆ ಮರಳಿ ವಿಕಸಿಸುವಾಗ, ಸೂರ್ಯನ ಕೆಳಗಿರುವ ಎಲ್ಲರಿಂದಲೂ ದೇವರ ಪ್ರೀತಿಯ ಆಜ್ಞೆಯು ಕೈಕೊಳ್ಳಲ್ಪಡುವುದು.MBK 55.2

    “ಯೆಹೋವನೇ ನಿನ್ನ ವಾಕ್ಯವು ಪರಲೋಕದಲ್ಲಿ ಶಾಶ್ವತವಾಗಿ ಸ್ಥಾಪಿಸಲ್ಪಟ್ಟಿದೆ.” “ಆತನ ನಿಯಮಗಳೆಲ್ಲಾ ಸ್ಥಿರವಾಗಿವೆ. ಅವು ದೃಢವಾದ ಆಧಾರವುಳ್ಳವು; ಯುಗಯುಗಾಂತರಕ್ಕೂ ಇರುವುವು. ಸತ್ಯನೀತಿಗಳಿಗನುಸಾರವಾಗಿ ವಿಧಿಸಲ್ಪಟ್ಟಿವೆ.” “ನೀನು ನಿನ್ನ ಕಟ್ಟಳೆಗಳನ್ನು ಯುಗಯುಗಾಂತರಕ್ಕೂ ಸ್ಥಾಪಿಸಿದ್ಧೀ ಎಂದು ನಾನು ಮೊದಲಿನಿಂದಲೇ ಅವುಗಳ ಮೂಲಕ ತಿಳಿದುಕೊಂಡಿದ್ದೇನೆ.” ಕೀರ್ತನೆ 119: 89; 111: 7, 8; 119: 152.MBK 56.1

    “ಆದುದರಿಂದ ಈ ಸಣ್ಣ ಸಣ್ಣ ಆಜ್ಞೆಗಳಲ್ಲಿಯಾದರೂ ಒಂದನ್ನು ಮೀರಿ ಜನರಿಗೂ ಹಾಗೆ ಮೀರುವುದಕ್ಕೆ ಬೋಧಿಸುವವನು ಪರಲೋಕ ರಾಜ್ಯದಲ್ಲಿ ಬಹಳ ಚಿಕ್ಕವನೆನಿಸಿಕೊಳ್ಳುವನು.” MBK 56.2

    ಹಾಗೆಂದರೆ, ಅದರಲ್ಲಿ ಅವನಿಗೆ ಸ್ಥಳವೇ ಇಲ್ಲ. ಬೇಕೆಂತಲೇ ಒಂದು ಆಜ್ಞೆಯನ್ನಾದರೂ ಮೀರುವವನು, ಆತ್ಮದಲ್ಲಿಯೂ ಮತ್ತು ಯಥಾರ್ಥವಾಗಿಯೂ ಅವುಗಳಲ್ಲಿ ಯಾವುದನ್ನೂ ಕೈಕೊಳ್ಳುವುದಿಲ್ಲ. “ಯಾಕಂದರೆ ಯಾವನಾದರೂ ಧರ್ಮಶಾಸ್ತ್ರವನ್ನೆಲ್ಲಾ ಕೈಕೊಂಡು ನಡೆದು ಒಂದೇ ಒಂದರಲ್ಲಿ ತಪ್ಪಿದರೆ ಅವನು ಎಲ್ಲಾ ವಿಷಯದಲ್ಲಿಯೂ ಅಪರಾಧಿಯಾಗುತ್ತಾನೆ.” ಯಾಕೋಬ 2: 1೦. MBK 56.3

    ಅವಿಧೇಯತೆಯು ಕ್ರಿಯೆಯಿಂದಲೇ ಮಾತ್ರ ಪಾಪವಲ್ಲ, ಆದರೆ ದೇವರು ಉಚ್ಚರಿಸಿರುವ ಆತನ ಚಿತ್ತಕ್ಕೆ ಅಣುವಿನಷ್ಟು ಭಿನ್ನತೆಯುಂಟಾದರೂ ಅದು ಪಾಪವೇ; ಯಾಕಂದರೆ ಇದರಲ್ಲಿ ಪಾಪಕ್ಕೂ ಮತ್ತು ಆತ್ಮಕ್ಕೂ ಇನ್ನೂ ಸಂಪರ್ಕವಿದೆಯೆಂದು ವ್ಯಕ್ತವಾಗುತ್ತದೆ. ಹೃದಯವು ತನ್ನ ಸೇವೆಯಲ್ಲಿ ಭಿನ್ನಾಭಿಪ್ರಾಯವುಳ್ಳದ್ದಾಗಿದೆ. ಕಾರ್ಯತಃ ದೇವರನ್ನು ನಿರಾಕರಿಸಿದ್ದು ವ್ಯಕ್ತವಾಗಿದೆ, ಆತನ ಸರ್ಕಾರದ ಕಾನೂನುಗಳಿಗೆ ವಿರೋಧವಾದ ಪ್ರತಿಭಟನೆಯಾಗಿದೆ. ಮನುಷ್ಯರು ದೇವರ ನಿಯಮಗಳಿಂದ ಮಾರುವಾಗಲೂ ಮತ್ತು ತಮ್ಮ ಕರ್ತವ್ಯದ ಪ್ರಮಾಣವನ್ನು ತಾವೇ ಏರ್ಪಡಿಸುವುದಕ್ಕೆ ಸ್ವಾತಂತ್ರರಾಗಿರಲು ಬಿಡಲ್ಪಟ್ಟಿದ್ದರೆ ಬೇರೆ ಬೇರೆಯವರ ಮನಸ್ಸುಗಳಿಗೆ ಯಥೋಚಿತವಾದ ವಿವಿಧ ಪ್ರಮಾಣಗಳೆಷ್ಟೋ ಉಂಟಾಗಿ, ದೇವರ ಸರ್ಕಾರವು ಆತನ ಕೈಯಿಂದ ಕಸಕೊಳ್ಳಲ್ಪಡುತ್ತಿತ್ತು. ಮನುಷ್ಯಚಿತ್ತವೇ ಉನ್ನತಿಗೊಂಡು, ದೇವರ ಪವಿತ್ರವಾದ ಮಹಾ ಚಿತ್ತವು,-ತನ್ನ ಕೈಸೃಷ್ಟಿಗೆ ತೋರಿಸಿದ ಆತನ ಪ್ರೀತಿಯ ಉದ್ದೇಶವು-ಅನಾದರಣೆ ಮತ್ತು ಅವಮಾನಗಳಿಗೀಡಾಗುತ್ತಿತ್ತು.MBK 56.4

    ಮನುಷ್ಯರು ತಮ್ಮ ಸ್ವಂತ ಮಾರ್ಗವನ್ನು ಹಿಂಬಾಲಿಸಲು ಆರಿಸಿಕೊಂಡಾಗ ಅವರು ದೇವರಿಗೆ ವಿರುದ್ಧವಾಗುತ್ತಾರೆ. ಅವರಿಗೆ ಪರಲೋಕ ರಾಜ್ಯದಲ್ಲಿ ಸ್ಥಳವಿರುವುದಿಲ್ಲ, ಯಾಕಂದರೆ ಪರಲೋಕದ ಮೂಲತತ್ವಗಳನ್ನೇ ಪ್ರತಿಭಟಿಸಿದ್ದಾರೆ. ದೇವರ ಚಿತ್ತವನ್ನು ಅಸಡ್ಡೆಮಾಡುವುದರಿಂದ, ದೇವರ ಮತ್ತು ಮನುಷ್ಯನ ವಿರೋಧಿಯಾದ ಸೈತಾನನ ಪಕ್ಷವನ್ನು ವಹಿಸುವವನಾಗಿದ್ದಾನೆ. ಒಂದು ಮಾತಿನಿಂದಲ್ಲ, ಅನೇಕ ಮಾತಿನಿಂದಲೂ ಅಲ್ಲ, ಆದರೆ ದೇವರು ನುಡಿದ ಪ್ರತಿಯೊಂದು ಮಾತಿನಿಂದಲೂ ಮನುಷ್ಯನು ಜೀವಿಸುತ್ತಾನೆ. ಎಷ್ಟೇ ಕ್ಷುದ್ರವಾಗಿ ಕಂಡರೂ ಆತನ ಒಂದು ವಾಕ್ಯವನ್ನಾದರೂ ಅಸಡ್ಡೆಮಾಡಿ ನಾವು ಕ್ಷೇಮವಾಗಿರಲಾರೆವು. ದೇವರ ಆಜ್ಞೆಗಳಲ್ಲಿ ಮಾನವನ ಸುಖಸಂತೋಷಗಳಿಗೆ ಅಡ್ಡಿಯಾದುದು ಯಾವುದೂ ಇಲ್ಲ, ಮನುಷ್ಯನು ಇವುಗಳಿಂದ ಬೇಲಿಯಂತೆ ಆವರಿಸಲ್ಪಟ್ಟು ದುಷ್ಟತನದಿಂದ ಸುರಕ್ಷಿತವಾಗಿರಿಸಲ್ಪಟ್ಟಿದ್ದಾನೆ. ಯಾವನು ದೇವರಿಂದ ಕಟ್ಟಲ್ಪಟ್ಟ ಈ ಎಲ್ಲೆಯನ್ನು ಒಂದು ಸ್ಥಳದಲ್ಲಿಯಾದರೂ ಮುರಿಯುತ್ತಾನೋ ಅವನು ತನ್ನ ರಕ್ಷಣಾರ್ಥವಾದ ಶಕ್ತಿಯನ್ನೇ ನಾಶಪಡಿಸುವವನಾಗಿದ್ದಾನೆ; ತನ್ನನ್ನು ನಾಶಪಡಿಸಿ ಹಾಳುಮಾಡಲು ವಿರೋಧಿಗೆ ಪ್ರವೇಶಿಸಲು ಮಾರ್ಗವನ್ನು ಕಲ್ಪಿಸಿಕೊಟ್ಟಿದ್ದಾನೆ. MBK 57.1

    ಒಂದೇ ಒಂದು ವಿಷಯದಲ್ಲಿ ದೇವರ ಚಿತ್ತವನ್ನು ಅಸಡ್ಡೆಮಾಡಲು, ನಮ್ಮ ಆದಿ ಮಾತೃಪಿತೃಗಳು ಲೋಕದ ನಾಶನದ ಪ್ರವಾಹದ್ವಾರವನ್ನು ತೆರೆದರು. ಅವರ ಉದಾಹರಣೆಯನ್ನು ಹಿಂಬಾಲಿಸುವ ಪ್ರತಿಯೊಬ್ಬನೂ ಅವರಿಗುಂಟಾದ ಫಲವನ್ನೇ ಕೊಯ್ಯುವನು. ದೇವರ ಪ್ರೀತಿಯು ಆತನ ಆಜ್ಞೆಗಳ ಪ್ರತಿಯೊಂದು ವಿಧಿಯ ಮೇಲೂ ಆತುಕೊಂಡಿದೆ, ಮತ್ತು ಈ ಆಜ್ಞೆಗಳಿಂದ ದೂರ ಸರಿಯುವವನು ತನ್ನ ಸ್ವಂತ ವ್ಯಥೆಗೂ ಮತ್ತು ನಾಶನಕ್ಕೂ ಮಾರ್ಗ ಕಲ್ಪಿಸುವವನಾಗಿದ್ದಾನೆ.MBK 57.2