Loading...
Larger font
Smaller font
Copy
Print
Contents
ಪರ್ವತ ಪ್ರಸಂಗ - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    “ನಿತ್ಯಜೀವಕ್ಕೆ ಹೋಗುವ ಬಾಗಿಲು ಇಕ್ಕಟ್ಟು ದಾರಿ ಬಿಕ್ಕಾಟ್ಟು.”

    ಕ್ರಿಸ್ತನು ಜೀವಿಸಿದ್ದ ಕಾಲದಲ್ಲಿ ಪಾಲೆಸ್ತೀನ ದೇಶದ ಜನರು ಬೆಟ್ಟಗಳ ಮೇಲೂ ಗುಡ್ಡಗಳ ಮೇಲೂ ಎತ್ತರವಾದ ಪೌಳಿಗೋಡೆಗಳಿಂದ ಭದ್ರವಾಗಿದ್ದ ಪಟ್ಟಣಗಳಲ್ಲಿ ವಾಸಿಸುತ್ತಿದ್ದರು. ಸೂರ್ಯಾಸ್ತಮದಲ್ಲಿ ಮುಚ್ಚಲ್ಪಡುತ್ತಿದ್ದ ಇವುಗಳ ಕದಗಳು ಇಳಿಜಾರಾದ ಮತ್ತು ಇಕ್ಕಟ್ಟಾದ ಬಂಡೆಯ ಮಾರ್ಗಗಳಿಂದಲೇ ಪ್ರವೇಶಿಸಲು ಸಾಧ್ಯವಾಗಿದ್ದುವು. ಆ ದಿನದ ಅಂತ್ಯದಲ್ಲಿ ಮನೆಗಳಿಗೆ ಹಿಂದಿರುಗುವ ಪ್ರಯಾಣಿಕರು, ರಾತ್ರಿಯಾಗುವುದಕ್ಕಿಂತ ಮುಂಚಿತವಾಗಿ ಪಟ್ಟಣವನ್ನು ಸೇರಬೇಕೆಂಬ ಲವಲವಿಕೆಯಿಂದಲೂ ತವಕದಿಂದಲೂ ಅವಸರವಾಗಿ ಬಹಳ ಪ್ರಯಾಸದಿಂದ ಬಂಡೆಗಳನ್ನೇರಿ ಬರುತ್ತಿದ್ದರು.MBK 138.2

    ಇಕ್ಕಟ್ಟಾದ ಊರ್ಧ್ವಮಾರ್ಗವೇ ಅವರವರ ನಿವಾಸಸ್ಥಳಕ್ಕೂ ವಿಶ್ರಾಂತಿಗೂ ನಡಿಸುವುದಾಗಿದ್ದುದರಿಮ್ದ, ಕ್ರೈಸ್ತನ ಮಾರ್ಗವನ್ನು ವರ್ಣಿಸಲು ಯುಕ್ತವಾದ ಒಂದು ಉಪಮಾನವು ಯೇಸುವಿಗೆ ದೊರೆಯಿತು. ಆತನು ಹೇಳಿದ್ದು-ನಾನು ನಿಮ್ಮ ಮುಂದೆ ಇಟ್ಟಿರುವ ಮಾರ್ಗವು ಇಕ್ಕಟ್ಟಾದುದು; ಬಾಗಲು ಪ್ರವೇಶಿಸಲು ಕಷ್ಟಸಾಧ್ಯವಾದದ್ದು; ಯಾಕಂದರೆ ಸ್ವರ್ಣಆಜ್ಞೆಯು ಎಲ್ಲಾ ದುರಭಿಮಾನ ಮತ್ತು ಸ್ವಾರ್ಥನ್ವೇಷಣೆಯನ್ನು ವಿಸರ್ಜಿಸುತ್ತದೆ. ಅಗಲವಾದ ಮಾರ್ಗವೂ ಇದೆ; ಆದರೆ ಅದರ ಅಂತ್ಯವು ನಾಶನವೇ. ಆತ್ಮೀಯ ಜೀವನ ಮಾರ್ಗವನ್ನು ಹತ್ತಬೇಕಾದರೆ ದೃಢಪ್ರತಿಜ್ಞೆಯಿಂದ ಏರಬೇಕು; ಯಾಕಂದರೆ ಅದು ಊರ್ಧ್ವಮಾರ್ಗ. ಅಲ್ಪಸಂಖ್ಯಾತರೊಡನೆ ನೀನು ಹೋಗಬೇಕು, ಯಾಕಂದರೆ ಕೆಳಮುಖಕ್ಕೆ ಇಳಿಯುವ ಮಾರ್ಗದಲ್ಲಿ ಹೋಗುವವರು ಅನೇಕರು.MBK 138.3

    ಮರಣದ ಮಾರ್ಗದಲ್ಲಿ ಜನಾಂಗಗಳೆಲ್ಲಾ ತಮ್ಮ ಪ್ರಾಪಂಚಿಕತೆ, ಸ್ವಾರ್ಥತೆ, ದುರಭಿಮಾನ, ಅಪ್ರಾಮಾಣಿಕತೆ ಮತ್ತು ಧರ್ಮಭ್ರಷ್ಟತೆಗಳೊಡನೆ ಹೋಗಬಹುದು. ಪ್ರತಿಯೊಬ್ಬ ಮನುಷ್ಯನೂ ತನ್ನ ಸ್ವಂತ ಸಲಹೆ ಮತ್ತು ತತ್ವಗಳನ್ನು ಹಿಂಬಾಲಿಸಲೂ, ತನ್ನ ಮನಸ್ಸು ಬಂದಂತೆ, ಮತ್ತು ತನ್ನ ಆತ್ಮಾನುರಾಗವು ವಿಧಿಸಿದಂತೆ ನಡೆಯಲೂ ಅವಕಾಶವಿದೆ. ನಾಶನಕ್ಕೆ ನಡಿಸುವ ಮಾರ್ಗದಲ್ಲಿ ನಡೆಯಬೇಕಾದರೆ, ಆ ಮಾರ್ಗವನ್ನು ಹುಡುಕುವ ಅವಶ್ಯವಿಲ್ಲ; ಯಾಕಂದರೆ ನಾಶನಕ್ಕೆ ಹೋಗುವ ಬಾಗಿಲು ಅಗಲವಾಗಿಯೂ ಮಾರ್ಗವು ವಿಶಾಲವಾಗಿಯೂ ಇದೆ. ಪಾದಗಳು ಸ್ವಾಭಾವಿಕವಾಗಿ ಮರಣದಲ್ಲಿ ಅಂತ್ಯವಾಗುವ ಸರಳಮಾರ್ಗವನ್ನೇ ಅನುಸರಿಸುತ್ತವೆ.MBK 139.1

    ಆದರೆ ನಿತ್ಯ ಜೀವಕ್ಕೆ ಹೋಗುವ ಮಾರ್ಗವು ಬಿಕ್ಕಟ್ಟು, ಬಾಗಿಲು ಬಿಕ್ಕಟ್ಟು. ನೀವು ಯಾವುದಾದರೊಂದು ಪಾಪಕ್ಕೆ ಅಂಟಿಕೊಂಡರೆ, ಆಗ ಮಾರ್ಗವು ನಿಮ್ಮ ಪ್ರವೇಶಕ್ಕೆ ಇಕ್ಕಟ್ಟಾಗಿ ಕಾಣುವುದು. ಕರ್ತನ ಹಾದಿಯನ್ನು ಹಿಂಬಾಲಿಸಬೇಕಾದರೆ ನಿಮ್ಮ ಸ್ವಂತ ಮಾರ್ಗಗಳನ್ನೂ, ಸ್ವಂತ ಇಚ್ಛೆಗಳನ್ನೂ, ಕೆಟ್ಟ ನಡತೆಗಳನ್ನೂ ಬಿಡಬೇಕು. ಕ್ರಿಸ್ತನನ್ನು ಸೇವಿಸಬೇಕೆಂದು ಅಪೇಕ್ಷಿಸುವವನು ಲೋಕವನ್ನಾಗಲೀ, ಲೋಕದ ಆಲೋಚನೆಗಳನ್ನಾಗಲೀ ಹಿಂಬಾಲಿಸಲಾರನು. ಪರಲೋಕ ಮಾರ್ಗವು ಸ್ಥಾನಮಾನಗಳಲ್ಲೂ ಘನತೆಯಲ್ಲೂ ಪ್ರವೇಶಿಸಲು ಬಹಳ ಇಕ್ಕಟ್ಟಾಗಿದೆ. ಸ್ವಾರ್ಥಮಗ್ನಭರಿತವಾದ ಆಶಾಪಾಶಗಳಿಂದ ಕೂಡಿ ಪ್ರವೇಶಿಸಲು ಮಾರ್ಗವು ಬಿಕ್ಕಟ್ಟಾಗಿದೆ; ಹಾಯಾದ ಜೀವಮಾನವನ್ನು ಪ್ರೀತಿಸುವವರಿಗೆ ಆ ಮಾರ್ಗವು ಒರಟೊರಟಾಗಿಯೂ ಕಡಿದಾಗಿಯೂ ಇದೆ. ದುಡಿಮೆ, ಸಹನೆ, ಆತ್ಮತ್ಯಾಗ, ನಿಂದಾಪಮಾನ. ದಾರಿದ್ರ್ಯ ಮತ್ತು ಪಾಪಿಗಳೊಡನೆ ವಿರೋಧ ಇವೆಲ್ಲವೂ ಕ್ರಿಸ್ತನ ಭಾಗಕ್ಕೆ ಬಂದುವು, ನಾವೂ ದೇವರ ಪರದೈಸಿಗೆ ಹೋಗಲಾಶಿಸಿದರೆ ಇವೆಲ್ಲಾ ನಮ್ಮ ಭಾಗಕ್ಕೂ ಬರಬೇಕು.MBK 139.2

    ಹೀಗಿದ್ದರೂ ಊರ್ಧ್ವಮಾರ್ಗವು ಕಠಿಣವೂ, ಕೆಳಮುಖವಾದ ಮಾರ್ಗವು ಸುಲಭವೂ ಆಗಿದೆ ಎಂದು ತೀರ್ಮಾನಿಸಬೇಡಿರಿ. ಮರಣಕ್ಕೆ ಹೋಗುವ ಮಾರ್ಗವೆಲ್ಲಾ ಸಂಕಟ, ಶಿಕ್ಷೆ, ವ್ಯಥೆ ಆಶಾಭಂಗ ಭರಿತವಾಗಿದೆ, ಮತ್ತು ಮುಂದಕ್ಕೆ ಹೋಗದಂತೆ ಎಚ್ಚರಿಕೆಯೂ ಕೊಡಲ್ಪಟ್ಟಿದೆ. ನಿರ್ಲಕ್ಷರು ಹಟಮಾರಿಗಳೂ ನಾಶವಾಗದಂತೆ ದೇವರ ಪ್ರೀತಿಯೇ ಆ ಮಾರ್ಗವನ್ನು ಕಷ್ಟತರವಾಗಿ ಮಾಡಿದೆ. ಸೈತಾನನ ಮಾರ್ಗವು ಆಕರ್ಷಣೀಯವಾಗಿದೆ ನಿಜ, ಆದರೆ ಅದೆಲ್ಲಾ ವಂಚಕವಾದುವುಗಳು; ದುಷ್ಟತನದ ಮಾರ್ಗದಲ್ಲಿ ಕರಕರೆಯಾದ ಮನದಳುಕೂ, ಮತ್ತು ಉಪ ಟಳದ ಭಯವೂ ತುಂಬಿದೆ. ದುರಭಿಮಾನವನ್ನೂ ಮತ್ತು ಪ್ರಾಪಂಚಿಕ ಆಶೆಗಳನ್ನೂ ಹಿಂಬಾಲಿಸುವುದು ರಮ್ಯವಾಗಿದೆ ಎಂದು ನಾವು ನೆನಸಬಹುದು; ಆದರೆ ಅದರ ಅಂತ್ಯವು ಸಂಕಟ ಮತ್ತು ವ್ಯಥೆಗಳೇ. ಸ್ವಾರ್ಥಪರ ಯೋಚನೆಗಳೆ ಮುಖಸ್ತುತಿಯ ವಾಗ್ದಾನಗಳನ್ನುಲ್ಲೇಖಿಸಿ, ಉಲ್ಲಾಸದ ನಿರೀಕ್ಷೆಯನ್ನು ತೋರಬಹುದು. ಆದರೆ ಅಂತ್ಯದಲ್ಲಿ ನಮ್ಮ ಸಂತೋಷವು ವಿಷಭರಿತವಾಗಿ, ನಮ್ಮ ಜೀವನದ ಸ್ವಾರ್ಥಮಗ್ನತೆಯ ನಿರೀಕ್ಷೆಯೂ ಕಹಿಯಾಗಬಹುದು. ಕೆಳಮುಖವಾಗಿ ಹೋಗುವ ಬಾಗಿಲು ಪುಷ್ಟಭರಿತವಾಗಿ ಮನೋಲ್ಲಾಸವಾಗಿರಬಹುದು. ಆದರೆ ಮಾರ್ಗದಲ್ಲಿ ಮುಳ್ಳುಗಳಿವೆ. ಅದರ ಪ್ರವೇಶಮಾರ್ಗಗಳಲ್ಲಿ ಪ್ರಕಾಶಿಸುವ ನಿರೀಕ್ಷೆಯ ಜ್ಯೋತಿಯು ಹತಾಶೆಯ ಅಂಧಕಾರದಲ್ಲಿ ಕಾಂತಿಹೀನವಾಗುತ್ತದೆ; ಆ ಮಾರ್ಗವನ್ನು ಹಿಂಬಾಲಿಸುವ ಆತ್ಮಗಳಾದರೋ ನಿತ್ಯವಾದ ನಿಶಿಯ ಛಾಯೆಯೊಳಕ್ಕೆ ಇಳಿದು ನಾಶವಾಗುವವು.MBK 139.3

    “ದ್ರೋಹಿಯ ಮಾರ್ಗವು ನಾಶಕರ” ಆದರೆ ಜ್ಞಾನವೆಂಬಾಕೆಯ ದಾರಿಗಳಾದರೋ ಸುಖಕರವಾಗಿವೆ, ಆಕೆಯ ಮಾರ್ಗಗಳೆಲ್ಲಾ ಸಮಾಧಾನವೇ” ಜ್ಞಾನೋಕ್ತಿ 13: 15; 3: 17. ಕ್ರಿಸ್ತನಿಗೆ ವಿಧೇಯವಾದ ಪ್ರತಿಯೊಂದು ಕ್ರಿಯೆಯೂ ಆತನಿಗೋಸ್ಕರವಾದ ಪ್ರತಿಯೊಂದು ಸ್ವಾರ್ಥತ್ಯಾಗದ ಕ್ರಿಯೆಯೂ, ಸಹಿಸಿದ ಪ್ರತಿಯೊಂದು ಸಂಕಟವೂ, ಶೋಧನೆಯ ಮೇಲೆ ಗಳಿಸಿದ ಪ್ರತಿಯೊಂದು ಜಯವೂ, ಅಂತ್ಯದ ಜಯದಲ್ಲಿ ದೊರಕುವ ಮಗಿಮೆಗೆ ಹೆಜ್ಜೆಗಳಾಗಿವೆ. ನಾವು ಕ್ರಿಸ್ತನನ್ನು ನಮ್ಮ ಮಾರ್ಗದರ್ಶಿಯಾಗಿ ಅಂಗೀಕರಿಸಿಕೊಂಡರೆ ಆತನು ನಮ್ಮನ್ನು ಸುಖವಾಗಿ ನಡಿಸುವನು. ಕೇವಲ ಕಡುಪಾಪಿಯಾದವನೂ ಸಹ ದಾರಿತಪ್ಪನು. ಕಳವಳಗೊಂಡು ಹುಡುಕುವವನೂ ಸುಸಂಗತವಾದ ಮತ್ತು ಪವಿತ್ರವಾದ ಬೆಳಕಿನಲ್ಲಿ ನಡೆಯಲು ತಪ್ಪಲಾರನು. ಆ ಮಾರ್ಗವು ಇಕ್ಕಟ್ಟಾಗಿದ್ದರೂ ಮತ್ತು ಪಾಪವು ಸಹಿಸಲಸದಳವಾದ ಪರಿಶುದ್ಧತೆಯುಳ್ಳದಾಗಿದ್ದರೂ ಪ್ರತಿಯೊಬ್ಬರಿಗೂ ಪ್ರವೇಶಾಧಿಕಾರವು ಸಂಪಾದಿಸಲ್ಪಟ್ಟಿದೆ. ಆದುದರಿಮ್ದ ಯಾವ ಸಂದೇಹಭರಿತ ಜರ್ಜರಿತ ಆತ್ಮವೂ ದೇವರು ನನ್ನನ್ನು ಲಕ್ಷಿಸುವುದಿಲ್ಲವೆಂದು ಹೇಳುವ ಅವಶ್ಯವಿಲ್ಲ.MBK 140.1

    ಮಾರ್ಗವು ಕರಡುಮೊರಡಾಗಿರಬಹುದು, ಮತ್ತು ಏರುದಿಣ್ಣೆಯು ಕಡಿದಾಗಿರಬಹುದು; ಎಡಬಲಗಡೆಗಳಲ್ಲಿ ಹಳ್ಳಕೊಳ್ಳಗಳಿರಬಹುದು; ನಮ್ಮ ಯಾತ್ರೆಯಲ್ಲಿ ಶ್ರಮೆಯನ್ನು ಅನುಭವಿಸಬೇಕಾಗಬಹುದು; ಆಯಾಸಗೊಂಡು ವಿಶ್ರಾಂತಿಯನ್ನು ಹಾರೈಸುವಾಗ, ನಾವು ಹೆಣಗಾಡಲೇ ಬೇಕಾಗಬಹುದು; ಮೈಮರೆತಾಗ ನಾವು ಹೋರಾಡಬೇಕಾಗಬಹುದು; ಧೈರ್ಯಗುಂದಿದಾಗ, ಇನ್ನೂ ನಿರೀಕ್ಷಿಸಬೇಕು; ಆದರೆ ಕ್ರಿಸ್ತನನ್ನು ನಮ್ಮ ಮಾರ್ಗದರ್ಶಿಯಾಗಿಟ್ಟುಕೊಂಡರೆ, ಹಾರೈಸಿದ ಪರಲೋಕವನ್ನು ಅಂತ್ಯದಲ್ಲಿ ಸೇರದೆ ಇರಲಾರೆವು. ಕ್ರಿಸ್ತನು ತಾನೇ ಕರಡುಮೊರಡಾದ ಮಾರ್ಗದಲ್ಲಿ ನಡೆದು ನಮ್ಮ ಪಾದಗಳಿಗೆ ಸುಗಮವಾಗಿ ಮಾಡಿದ್ದಾನೆ.MBK 140.2

    ನಿತ್ಯಜೀವಕ್ಕೆ ನಡಿಸುವ ಕಡಿದಾದ ಮಾರ್ಗದಲ್ಲೆಲ್ಲಾ ಬಳಲಿದವರನ್ನು ನವಚೈತನ್ಯಗೊಳಿಸುವ ಜೀವಜಲದ ಒರತೆಗಳಿವೆ. ಜ್ಞಾನದ ಮಾರ್ಗದಲ್ಲಿ ನಡೆಯುವವರೆಲ್ಲರೂ ಸಂಕಟದಲ್ಲೂ ಅಧಿಕ ಉಲ್ಲಾಸಭರಿತರಾಗಿರುವರು; ಯಾಕಂದರೆ ಅವರ ಆತ್ಮಗಳನ್ನು ಪ್ರೀತಿಸುವಾತನು, ಅಗೋಚರನಾಗಿ ಅವರ ಪಕ್ಕದಲ್ಲಿ ನಡೆಯುತ್ತಿದ್ದಾನೆ. ಪ್ರತಿಯೊಂದು ಊರ್ಧ್ವಹೆಜ್ಜೆಯಲ್ಲೂ ಆತನ ಹಸ್ತದ ಸ್ಪರ್ಶವನ್ನು ಪರಿಷ್ಕಾರವಾಗಿ ಗ್ರಹಿಸುವರು; ಪ್ರತಿಯೊಂದು ಹೆಜ್ಜೆಗೂ ಅದೃಶ್ಯವಾದಾತನ ಬಳಿಯಿಂದ ಮಹಿಮೆಯ ಉಜ್ವಲ ಕಿರಣಗಳು ಅವರ ಮಾರ್ಗವನ್ನು ಬೆಳಗುವವು; ಅವರ ಸ್ತೋತ್ರಗೀತೆಗಳೂ ಅತ್ಯಂತ ಇಂಪಾಗಿ ಸಿಂಹಾಸನದ ಬಳಿ ಹಾಡುತ್ತಿರುವ ದೇವದೂತರ ಗಾನಗಳೊಡನೆ ಸಮ್ಮಿಲನವಾಗುವವು. “ನೀತಿವಂತರ ಮಾರ್ಗವು ಮಧ್ಯಾಹ್ನದವರೆಗೂ ಹೆಚ್ಚುತ್ತಾ ಬರುವ ಬೆಳಗಿನ ಬೆಳಕಿನಂತಿದೆ.” ಜ್ಞಾನೋಕ್ತಿ 4: 18.MBK 141.1