Loading...
Larger font
Smaller font
Copy
Print
Contents
ಪರ್ವತ ಪ್ರಸಂಗ - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಶಾಂತರು ಧನ್ಯರು

    ಧನ್ಯವಾಕ್ಯಗಳ ಆದ್ಯಂತವೂ ಕ್ರೈಸ್ತ ಅನುಭವದ ಪ್ರವರ್ಧಮಾನದ ಎಲ್ಲೆಯು ಕಾಣುತ್ತದೆ. ಕ್ರಿಸ್ತನು ತಮಗೆಷ್ಟು ಅವಶ್ಯಕನೆಂದು ಅರಿತಿರುವವರೂ ಮತ್ತು ಪಾಪಕ್ಕಾಗಿ ದುಃಖಪಟ್ಟವರೂ ಕ್ರಿಸ್ತನೊಡನೆ ಸಂಕಟವೆಂಬ ಶಾಲೆಯಲ್ಲಿ ದೈವ ಗುರುವಿನಿಂದ ಸಹನೆಯನ್ನು ಕಲಿಯುವರು. ತಪ್ಪಾಗುವಲ್ಲಿ ಶಮೆ ಮತ್ತು ಸೌಮ್ಯತೆಯಿಂದ ವರ್ತಿಸುವುದು ಅಜ್ಞಾನಿಗಳಿಂದಲೂ ಮತ್ತು ಯೆಹೂದ್ಯರಿಂದಲೂ ವಿಶೇಷ ಗುಣಗಳೆಂದು ಮೆಚ್ಚಿಕೆ ಹೊಂದಿರಲಿಲ್ಲ. ಮೋಶೆಯು ಪರಿಶುದ್ಧಾತ್ಮನ ಪ್ರೇರಣೆಯಿಂದ “ಮೋಶೆ ಭೂಮಿಯ ಮೇಲಿರುವ ಎಲ್ಲಾ ಮನುಷ್ಯರಿಗಿಂತಲೂ ಬಹು ಸಾತ್ವಿಕನು” ಎಂದು ಬರೆದಿದ್ದು ಆಗಿನ ಕಾಲದ ಜನರಿಂದ ಅದೊಂದು ಪ್ರಶಂಸನೀಯವಾದ ಕಾರ್ಯವೆಂದು ಪರಿಗಣಿಸಲ್ಪಡುತ್ತಿರಲಿಲ್ಲ; ಬಹುಶಃ ವಿಷಾದ ಅಥವಾ ತಾತ್ಸಾರಗಳು ಕೆರಳುತ್ತಿದ್ದವು, ಆದರೆ ಕ್ರಿಸ್ತನು ತನ್ನ ರಾಜ್ಯಕ್ಕೆ ಯೋಗ್ಯವಾದುವುಗಳಲ್ಲಿ ಸಹನೆಗೆ ಪ್ರಥಮಸ್ಥಾನವನ್ನು ನೀಡಿದ್ದಾನೆ. ಆತನ ಜೀವ್ಯ ಮತ್ತು ಗುಣಗಳಲ್ಲಿ ಆತನ ಅಮೂಲ್ಯ ಪ್ರಸಾದದ ದೈವೀಕ ಮನೋಜ್ಞತೆಯು ಪ್ರಕಟವಾಗಿದೆ. ಪರಮತಂದೆಯ ಮಹಿಮೆಯ ಪ್ರತಿಬಿಂಬವಾದ ಕ್ರಿಸ್ತನು “ದೇವರಿಗೆ ಸರಿಸಮಾನನಾಗಿರುವದೆಂಬ ಅಮೂಲ್ಯ ಪದವಿಯನ್ನು ಬಿಡಲೊಲ್ಲನು ಎಂದೆಣಿಸದೆ ತನ್ನನ್ನು ಬರಿದು ಮಾಡಿಕೊಂಡು ದಾಸನ ರೂಪವನ್ನು ಧರಿಸಿಕೊಂಡು ಮನುಷ್ಯರಿಗೆ ಸದೃಶ್ಯನಾದನು” ಫಿಲಿಪ್ಪಿ 2:6,7. ತಾನು ಸ್ವೇಚ್ಛೆಯಿಂದ ಎಲ್ಲಾ ವಿನೀತ ಅನುಭವಗಳಿಗೂ ಅಧೀನನಾಗಿ ಮನುಷ್ಯಪುತ್ರರೊಡನೆ ಒಡನಾಡಿದನು, ಅರಸನಂತೆ ಜನರಿಂದ ಗೌರವವನ್ನು ನಿರ್ಬಂಧಪಡಿಸದೆ ಇತರರಿಗೆ ಸೇವೆಮಾಡುವವನಾಗಿಯೇ ಜೀವಿಸಿದನು ಆತನ ವರ್ತನೆಯಲ್ಲಿ ಮತಾಂಧತೆಯ ಕಳಂಕವಾಗಲೀ ಅಥವಾ ಅನಾದರದ ವ್ರತಶೀಲನೆಯಾಗಲೀ ಇರಲಿಲ್ಲ. ಲೋಕರಕ್ಷಕನು ದೇವದೂತರಿಗಿಂತಲೂ ಅಧಿಕನಾಗಿದ್ದನಾದರೂ ಆತನ ದೈವೀಕ ಪ್ರಭಾವದೊಡನೆ ಸಹನೆ ಮತ್ತು ದೈನ್ಯತೆಯು ಸೇರಿ ಎಲ್ಲರನ್ನೂ ತನ್ನ ಬಳಿಗೆ ಒಲಿಸಿಕೊಂಡನು.MBK 17.2

    ಕ್ರಿಸ್ತನು ತನ್ನನ್ನೇ ಬರಿದುಮಾಡಿಕೊಂಡನು, ಮತ್ತು ಆತನು ಮಾಡಿದ್ದೆಲ್ಲದರಲ್ಲೂ ಸ್ವಾರ್ಥತೆಯು ಕಾಣಲಿಲ್ಲ. ತನ್ನ ತಂದೆಯ ಚಿತ್ತಕ್ಕೆ ಸಕಲವನ್ನೂ ಅಧೀನ ಮಾಡಿದನು. ಭೂಲೋಕದಲ್ಲಿ ಆತನ ಸೇವೆಯು ಮುಗಿಯುವ ವೇಳೆಗೆ “ಮಾಡಬೇಕೆಂದು ನೀನು ಕೊಟ್ಟ ಕೆಲಸವನ್ನು ನಾನು ನೆರವೇರಿಸಿ ನಿನ್ನನ್ನು ಭೋಲೋಕದಲ್ಲಿ ಮಹಿಮೆಪಡಿಸಿದೆನು” ಯೋಹಾನ 17:4, ಎಂದು ಹೇಳಲು ಸಾಧ್ಯವಾಗುವುದು. ಮತ್ತು ಆತನು ನಮಗೆ ಹೇಳುವುದೇನೆಂದರೆ: “ನಾನು ಸಾತ್ವಿಕನೂ ದೀನಮನಸ್ಸುಳ್ಳವನೂ ಆಗಿರುವುದರಿಂದ ನನ್ನಲ್ಲಿ ಕಲಿತುಕೊಳ್ಳಿರಿ” “ಯಾವನಿಗಾದರೂ ನನ್ನ ಹಿಂದೆ ಬರುವುದಕ್ಕೆ ಮನಸ್ಸಿದ್ದರೆ ಅವನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನ ಹಿಂದೆ ಬರಲಿ.” (ಮತ್ತಾಯ 11:29; 16:24) ಸ್ವಾರ್ಥತೆಯು ಪದಚ್ಯತವಾಗಲಿ ಮತ್ತು ಆತ್ಮದ ಶ್ರೇಷ್ಠತೆಯಲ್ಲಿ ತಲ್ಲೀನವಾಗದಿರ್ರಿ.MBK 18.1

    ಯೇಸುವನ್ನು ಆತನ ಸ್ವಾರ್ಥತ್ಯಾಗದಲ್ಲಿಯೂ ಮತ್ತು ಹೃದಯದ ದೀನತೆಯಲ್ಲೂ ನೋಡುವವರು ದಾನಿಯೇಲನು ಹೇಳಿದಂತೆ “ಆ ಅದ್ಭುತ ದರ್ಶನವನ್ನು ಕಂಡು ಶಕ್ತಿಯನ್ನೆಲ್ಲಾ ಕಳೆದುಕೊಂಡೆನು, ನನ್ನ ಗಾಂಭೀರ್ಯವು ಹಾಳಾಯಿತು, ನಿತ್ರಾಣನಾದೆನು” ದಾನಿಯೇಲ 10:8, ಎಂದು ಹೇಳುವರು. ನಾವು ಹೆಚ್ಚಳ ಪಡುವ ಅಪರಾಧೀನತೆ ಮತ್ತು ಆತ್ಮಶ್ರೇಷ್ಠತೆಗಳು ತಮ್ಮ ಸಹಜ ನೀಚತನದಲ್ಲಿ ಕಂಡುಬಂದು ಸೈತಾನನಿಗೆ ನಮ್ಮ ಗುಲಾಮಗಿರಿಯ ಕುರುಹಾಗಿ ಪರಿಣಮಿಸುವುವು. ಮನುಷ್ಯ ಸ್ವಭಾವವು ತನ್ನ ಭಾವವನ್ನು ನಿರೂಪಿಸಲು ಹೆಣಗುತ್ತಾ ವಾಗ್ಯುದ್ಧಕ್ಕೆ ಎಲ್ಲಾ ಕಾಲಗಳಲ್ಲಿಯೂ ಸಿದ್ಧವಾಗಿದೆ; ಆದರೆ ಕ್ರಿಸ್ತನಲ್ಲಿ ಕಲಿತವರು ಸ್ವಾರ್ಥತೆ, ದುರಭಿಮಾನ, ಆತ್ಮಶ್ರೇಷ್ಠತೆಯ ಆಶೆ ಮುಂತಾದುವುಗಳಿಂದ ತಮ್ಮನ್ನು ಬರಿದು ಮಾಡಿಕೊಂಡು ಅವರ ಆತ್ಮದಲ್ಲಿ ನೀರವರತೆಯು ತೋರಿಬರುವುದು. ಸ್ವಾರ್ಥತೆಯು ಪರಿಶುದ್ಧಾತ್ಮನ ನಿಯಾಮಕ ಶಕ್ತಿಗೆ ಅಧೀನವಾಗುವುದು. ಆಗ ನಾವು ಶ್ರೇಷ್ಠಸ್ಥಾನಗಳನ್ನು ಅಪೇಕ್ಷಿಸುವುದಿಲ್ಲ. ನಮ್ಮನ್ನು ನಾವು ಎಲ್ಲರ ಗಮನವನ್ನೂ ಆಕರ್ಷಿಸುವ ಪ್ರಧಾನ್ಯವನ್ನು ಇಚ್ಛಿಸೆವು; ಆದರೆ ನಮ್ಮ ಶ್ರೇಷ್ಠಸ್ಥಾನವು ರಕ್ಷಕನ ಪಾದಗಳೆಡೆಯಲ್ಲಿದೆ ಎಂಬುದನ್ನು ಗ್ರಹಿಸಿಕೊಳ್ಳುತ್ತೇವೆ. ಯೇಸುವಿನ ಕರಗಳು ನಮ್ಮನ್ನು ನಡಿಸುವಂತೆಯೂ ಆತನ ಧ್ವನಿಯು ನಮಗೆ ಮಾರ್ಗದರ್ಶಕವಾಗುವಂತೆಯೂ ಆತನನ್ನು ನಿರೀಕ್ಷಿಸುತ್ತಾ ಕಾಯುತ್ತೇವೆ. ಅಪೋಸ್ತಲನಾದ ಪೌಲನಿಗೆ ಈ ಅನುಭವವು ಉಂಟಾಯಿತು. ಅವನು ಹೇಳಿದ್ದೇನೆಂದರೆ, “ಕ್ರಿಸ್ತನೊಂದಿಗೆ ಶಿಲುಬೆಗೆ ಹಾಕಿಸಿಕೊಂಡವನಾಗಿದ್ದೇನೆ; ಇನ್ನು ಜೀವಿಸುವವನು ನಾನಲ್ಲ, ಕ್ರಿಸ್ತನು ನನ್ನಲ್ಲಿ ಜೀವಿಸುತ್ತಾನೆ; ಈಗ ಶರೀರದಲ್ಲಿರುವ ನಾನು ಜೀವಿಸುವುದು ಹೇಗೆಂದರೆ ದೇವಕುಮಾರನ ಮೇಲಣ ನಂಬಿಕೆಯಿಂದಲೇ. ಆತನು ನನ್ನನ್ನು ಪ್ರೀತಿಸಿ ನನಗೋಸ್ಕರ ತನ್ನನ್ನು ಒಪ್ಪಿಸಿಕೊಟ್ಟನು” ಗಲಾತ್ಯ 2:20.MBK 18.2

    ನಾವು ಕ್ರಿಸ್ತನನ್ನು ನಮ್ಮ ಆತ್ಮಗಳ ನಿರಂತರ ಅತಿಥಿಯನ್ನಾಗಿ ಅಂಗೀಕರಿಸಿಕೊಂಡರೆ ಎಲ್ಲಾ ತಿಳಿವಳಿಕೆಯನ್ನೂ ಖಂಡಿಸುವ ದೇವರ ಸಮಾಧಾನವು ಕ್ರಿಸ್ತನ ಮೂಲಕವಾಗಿ ನಮ್ಮ ಹೃದಯಗಳನ್ನೂ ಮನಸ್ಸುಗಳನ್ನೂ ಸ್ವಾಧೀನದಲ್ಲಿಡುತ್ತದೆ. ನಮ್ಮ ರಕ್ಷಕನ ಜೀವನವು ಹೋರಾಟಗಳ ನಡುವೆ ಇದ್ದಿತಾದರೂ, ಸಮಾಧಾನದ ಜೀವನವಾಗಿತ್ತು. ಕೆರೆಳಿದ ವಿರೋಧಿಗಳು ಸಂಸತವಾಗಿ ಆತನನ್ನು ಬೆನ್ನಟ್ಟಿದಾಗ ಆತನು ಹೇಳಿದ್ದೇನೆಂದರೆ, “ನನ್ನನ್ನು ಕಳುಹಿಸಿಕೊಟ್ಟಾತನು ನನ್ನ ಸಂಗಡ ಇದ್ದಾನೆ, ನಾನು ಆತನಿಗೆ ಮೆಚ್ಚಿಕೆಯಾದದ್ದನ್ನು ಯಾವಾಗಲೂ ಮಾಡುವುದರಿಂದ ಆತನು ನನ್ನನ್ನು ಒಂಟಿಗನಾಗಿ ಬಿಡಲಿಲ್ಲ ಅಂದನು.” ಯೋಹಾನ 8:29. ಮಾನವನ ಮತ್ತು ಸೈತಾನನ ಕ್ರೋಧಗಳಾವುವೂ ದೇವರೊಡನೆ ಆತನಿಗಿರುವ ಪರಿಪೂರ್ಣ ಸಂಸರ್ಗವನ್ನು ಕ್ಷೋಭೆಗೊಳಿಸವು. ಆತನು ನಮಗೆ ಹೇಳುವುದೇನೆಂದರೆ “ಶಾಂತಿಯನ್ನು ನಿಮಗೆ ಬಿಟ್ಟು ಹೋಗುತ್ತೇನೆ, ನನ್ನಲ್ಲಿರುವಂಥ ಶಾಂತಿಯನ್ನು ನಿಮಗೆ ಕೊಡುತ್ತೇನೆ; ಲೋಕವು ಕೊಡುವ ರೀತಿಯಿಂದ ನಾನು ನಿಮಗೆ ಕೊಡುವುದಿಲ್ಲ.” “ನಾನು ಸಾತ್ವಿಕನೂ ದೀನಮನಸ್ಸುಳ್ಳವನೂ ಆಗಿರುವುದರಿಂದ ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡ ನನ್ನಲ್ಲಿ ಕಲಿತುಕೊಳ್ಳಿರಿ; ಆಗ ನಿಮ್ಮ ಆತ್ಮಗಳಿಗೆ ವಿಶ್ರಾಂತಿ ಸಿಕ್ಕುವುದು” ಯೋಹಾನ 14:27; ಮತ್ತಾಯ 11:29. ದೇವರ ಮಹಿಮೆಗಾಗಿಯೂ ಮತ್ತು ಮಾನವನ ಸಂತಾನದ ಉದ್ಧಾರಕ್ಕಾಗಿಯೂ ಸೇವೆಯೆಂಬ ನೊಗವನ್ನು ಹೊತ್ತುಕೊಳ್ಳಿರಿ, ಆಗ ಈ ನುಗವು ಮೃದುವಾಗಿಯೂ ಹೊರೆಯ ಹೌರವಾಗಿಯೂ ಪರಿಣಮಿಸವುದು.MBK 20.1

    ಸ್ವಾರ್ಥತೆಯಲ್ಲಿ ಮಮತೆಯಿಡುವಾಗಲೇ ನಮ್ಮ ಸಮಾಧಾನವು ನಾಶವಾಗುವುದು. ಸ್ವಾರ್ಥತೆಯು ಜೀವಿತವಾಗಿರಲು ಅವಹೇಳನ ನಾಚಿಕೆಗಳಿಂದ ಕಾಯಲು ನಾವು ಸದಾ ಸಿದ್ಧರಾಗಿ ನಿಂತಿರುವೆವು; ಆದರೆ ನಾವು ಗತಜೀವರಾದಾಗ ನಮ್ಮ ಜೀವವು ಕ್ರಿಸ್ತನೊಡನೆ ದೇವರಲ್ಲಿ ಆಶ್ರಯ ಹೊಂದಲು ತಾತ್ಸಾರ ಅಸಡ್ಡೆಗಳನ್ನು ನಾವು ಗಣನೆಗೆ ತಂದುಕೊಳ್ಳೆವು. ನಿಂದನೆಗಳಿಗೆ ಕಿವುಡರಾಗಿಯೂ ಮತ್ತು ತಿರಸ್ಕಾರ ಮುಖಭಂಗಗಳಿಗೆ ಕುರುಡರಾಗಿಯೂ ವರ್ತಿಸುವೆವು. “ಪ್ರೀತಿಯು ಬಹು ತಾಳ್ಮೆಯುಳ್ಳದ್ದು, ಪ್ರೀತಿ ದಯೆ ತೋರಿಸುವುದು, ಹೊಟ್ಟೇಕಿಚ್ಚು ಪಡುವುದಿಲ್ಲ, ಹೊಗಳಿಕೊಳ್ಳುವುದಿಲ್ಲ, ಉಬ್ಬಿಕೊಳ್ಳುವುದಿಲ್ಲ; ಮರ್ಯಾದೆಗೆಟ್ಟು ನಡೆಯುವುದಿಲ್ಲ, ಸ್ವಪ್ರಯೋಜನವನ್ನು ಚಿಂತಿಸುವುದಿಲ್ಲ, ಸಿಟ್ಟುಹೊಳ್ಳುವುದಿಲ್ಲ, ಅಪಕಾರವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವುದಿಲ್ಲ; ಅನ್ಯಾಯವನ್ನು ನೋಡಿ ಸಂತೋಷತಡದೆ ಸತ್ಯಕ್ಕೆ ಜಯವಾಗುವಲ್ಲಿ ಸಂತೋಷಪಡುತ್ತದೆ; ಎಲ್ಲವನ್ನೂ ಅಡಗಿಸಿಕೊಳ್ಳುತ್ತದೆ, ಎಲ್ಲವನ್ನೂ ನಂಬುತ್ತದೆ, ಎಲ್ಲವನ್ನೂ ನಿರೀಕ್ಷಿಸುತ್ತದೆ, ಎಲ್ಲವನ್ನೂ ಸಹಿಸಿಕೊಳ್ಳುತ್ತದೆ. ಪ್ರೀತಿಯು ಎಂದಿಗೂ ಬಿದ್ದುಹೋಗುವುದಿಲ್ಲ; ಪ್ರವಾದನೆಗಳಾದರೋ ಬಿದ್ದುಹೋಗುವುವು…………....” 1 ಕೊರಿಂಥ 13: 4-8.MBK 20.2

    ಕಾಲಪರಿಸ್ಥಿತಿಯಲ್ಲಿ ವೈವಿಧ್ಯವುಂಟಾಗುವ ಹಾಗೆ ನಾವು ಲೋಕದವುಗಳಿಂದ ಹೊಂದುವ ಆನಂದಗಳೂ ಬದಲಾವಣೆ ಹೊಂದಲುಳ್ಳವುಗಳಾಗಿವೆ; ಕ್ರಿಸ್ತನಿಂದಾಗುವ ಸಮಾಧಾನವಾದರೋ ಅಚಲವೂ ಶಾಶ್ವತವೂ ಆಗಿದೆ. ಜೀವನದ ಯಾವ ಪರಿಸ್ಥಿತಿಯ ಮೇಲೂ ಇದು ಆತುಕೊಳ್ಳದು, ಐಹಿಕ ಸಂಪತ್ತು ಅಥವಾ ಪ್ರಾಪಂಚಿಕ ಮಿತ್ರರಾರ ಮೇಲೂ ಆತುಕೊಳ್ಳದು. ಕ್ರಿಸ್ತನೇ ಜೀವಜಲದ ಬುಗ್ಗೆಯಾಗಿದ್ದಾನೆ, ಆತನಿಂದ ಹೊಂದಿದ ಸಂತೋಷವು ಎಂದಿಗೂ ಕ್ಷೀಣವಾಗುವುದಿಲ್ಲ.MBK 21.1

    ಸಂಸಾರದಲ್ಲಿ ವ್ಯಕ್ತಪಡಿಸಲ್ಪಟ್ಟ ಕ್ರಿಸ್ತನ ಸಹನೆಯು ಅಲ್ಲಿನ ನಿವಾಸಿಗಳನ್ನು ಸಂತೋಷಗೊಳಿಸುತ್ತದೆ; ಕಲಹವನ್ನು ಕೆರಳಿಸದು, ಸಿಟ್ಟಿನಿಂದ ಪ್ರತ್ಯುತ್ತರವೀಯದು, ಆದರೆ ರೇಹಿದ ಮನಸ್ಸನ್ನು ಉಪಶಮನಪಡಿಸಿ, ಸೊಬಗಿನಿಂದ ಕೂಡಿದ ಕುಟುಂಬದ ಸೌಮ್ಯತೆಯನ್ನು ಸೂಸುವುದು. ಈ ರೀತಿಯ ಗುಣಗಳು ಎಲ್ಲೆಲ್ಲಿ ಆದರಿಸಲ್ಪಟ್ಟಾಗ್ಯೂ ಭೂಮಿಯ ಎಲ್ಲಾ ಮನೆತನದವರೂ ಮೇಲ್ಲೋಕದ ಮಹಾ ಕುಟುಂಬದ ಒಂದು ಭಾಗವೆಂದೆನಿಸುತ್ತದೆ. ನಮ್ಮ ವಿರೋಧಿಗಳ ಮೇಲಣ ಪ್ರತೀಕಾರದ ಕ್ರೂರಯಾತನೆಯನ್ನು ನಮ್ಮ ಮೇಲೆಯೇ ಬರಮಾಡಿಕೊಳ್ಳುವುದಕ್ಕಿಂತಲೂ ಸುಳ್ಳು ಆಪಾದನೆಗೊಳಗಾಗಿ ಕಷ್ಟಪಡುವುದೇ ಲೇಸು. ಹಗೆತನ ಮತ್ತು ಪ್ರತೀಕಾರ ಬುದ್ಧಿಯು ಸೈತಾನನಿಂದಲೇ ಉತ್ಪತ್ತಿಯಾಯಿತು, ಇವುಗಳನ್ನು ಅಭ್ಯಾಸಿಸುವವರಿಗೆ ಕೇಡೇ ಸಂಭವಿಸುವುದು ಸಹಜವಾಗಿದೆ. ಹೃದಯದ ನಮ್ರತೆ, ಕ್ರಿಸ್ತನಲ್ಲಿ ಶಾಶ್ವತವಾಗಿರುವುದರ ಫಲ; ಇದೇ ಆಶೀರ್ವಾದದ ವಾಸ್ತವವಾದ ರಹಸ್ಯ ವಾಗಿದೆ. “ಯೆಹೋವನು…..ದೀನರನ್ನು ರಕ್ಷಣೆಯಿಂದ ಭೂಷಿಸುತ್ತಾನೆ” ಕೀರ್ತನೆ 149:4.MBK 21.2

    “ಶಾಂತರು….. ಭೂಮಿಗೆ ಬಾಧ್ಯರಾಗುವರು” ಆತ್ಮಪ್ರಶಂಸೆಯ ಆಶೆಯ ಮೂಲಕವೇ ಪಾಪವು ಲೋಕದೊಳಗೆ ಪ್ರವೇಶಿಸಿತು, ಇದರ ಪರಿಣಾಮವಾಗಿ ನಮ್ಮ ಆದಿ ಮಾತಾಪಿತೃಗಳು ತಮ್ಮ ಸಾಮ್ರಾಜ್ಯವಾದ ಈ ರಮಣೀಯ ಪೃಥ್ವಿಯ ಪ್ರಭುತ್ವವನ್ನು ಕಳಕೊಂಡರು. ಕ್ರಿಸ್ತನಾದರೋ ಕಳೆದುಹೋದ ಈ ಪ್ರಭುತ್ವವನ್ನು ತನ್ನ ಆತ್ಮಾಭಿಮಾನ ನಿರಾಕರಣೆಯಿಂದ ವಿಮೋಚಿಸಿದನು. ಆತನು ಜಯಹೊಂದಿದಂತೆ ನಾವೂ ಜಯಹೊಂದಬೇಕೆನ್ನುತ್ತಾನೆ. (ಪ್ರಕಟನೆ 3:21) ದೈನ್ಯತೆ ಮತ್ತು ಆತ್ಮಾರ್ಪಣೆಯ ಮೂಲಕವಾಗಿ “ಶಾಂತರು ಭೂಮಿಗೆ ಬಾಧ್ಯರಾಗುವ” ಕೀರ್ತನೆ 37:11, ಸಮಯದಲ್ಲಿ ನಾವೂ ಆತನೊಡನೆ ಬಾಧ್ಯರಾಗಬಹುದು.MBK 22.1

    ಶಾಂತರಿಗೆ ವಾಗ್ದಾನ ಮಾಡಲ್ಪಟ್ಟಿರುವ ಭೂಮಿಯು ನಮ್ಮ ಈ ಭೂಮಿಯಂತೆ ಮರಣ ಛಾಯೆಯಿಂದಲೂ ಮತ್ತು ಶಾಪದಿಂದಲೂ ಅಂಧಕಾರಮಯವಾಗಿರದು. “ನಾವು ದೇವರ ವಾಗ್ದಾನವನ್ನು ನಂಬಿ ನೂತನಾಕಾಶಮಂಡಲವನ್ನೂ ನೂತನ ಭೂಮಂಡಲವನ್ನೂ ಎದುರು ನೋಡುತ್ತಾ ಇದ್ದೇವೆ; ಅವುಗಳಲ್ಲಿ ನೀತಿಯು ವಾಸವಾಗಿರುವುದು.” “ಇನ್ನು ಶಾಪಗ್ರಸ್ಥವಾದದ್ದು ಒಂದೂ ಇರುವುದಿಲ್ಲ. ಆ ಪಟ್ಟಣದಲ್ಲಿ ದೇವರ ಮತ್ತು ಯಜ್ಞದ ಕುರಿಯಾದಾತನ ಸಿಂಹಾಸನವಿರುವುದು.” 2 ಪ್ರೇತ 3:13; ಪ್ರಕಟನೆ 22:3.MBK 22.2

    ಅಲ್ಲಿ ಆಶಾಭಂಗವಿರದು, ವ್ಯಥೆ, ಪಾಪಗಳಿರವು, ನಾನು ಅಸ್ವಸ್ಥನಾಗಿದ್ದೇನೆಂದು ಯಾರೂ ಹೇಳರು; ಶವದ ಗಾಡಿಗಳಿಲ್ಲ, ಮರಣ, ದುಃಖ, ವಿಯೋಗಭಗ್ನ ಹೃದಯಗಳಾವುವೂ ಇರುವುದಿಲ್ಲ; ಆದರೆ ಯೇಸುವು ಅಲ್ಲಿದ್ದಾನೆ, ಅದು ಸಮಾಧಾನದ ಬೀಡಾಗಿರುತ್ತದೆ, ಅಲ್ಲಿ “ಅವರಿಗೆ ಹಸಿವೆ ಬಾಯಾರಿಕೆಗಳು ಆಗವು. ಝಳವೂ ಬಿಸಿಲೂ ಬಡಿಯವು; ಅವರನ್ನು ಕರುಣಿಸುವಾತನು ದಾರಿತೋರಿಸುತ್ತಾ ನೀರುಕ್ಕುವ ಒರತೆಗಳ ಬಳಿಯಲ್ಲಿ ನಡಿಸುವನು” ಯೆಶಾಯ 49:10.MBK 22.3

    “ನೀತಿಗೆ ಹಸಿದು ಬಾಯಾರಿದವರು ಧನ್ಯರು; ಅವರಿಗೆ ತೃಪ್ತಿಯಾಗುವುದು” ನೀತಿಯೆಂದರೆ ಪವಿತ್ರತೆ, ದೈವಸಾದೃಶ್ಯ; “ದೇವರು ಪ್ರೀತಿಸ್ವರೂಪಿ” 1 ಯೋಹಾನ 4:16. ಇದು ದೇವರ ಆಜ್ಞೆಗಳಿಗೆ ಅನುಗುಣವಾಗಿದೆ; ಯಾಕೆಂದರೆ “ನಿನ್ನ ಆಜ್ಞೆಗಳೆಲ್ಲಾ ನೀತಿಯೇ (ಕೀರ್ತನೆ 119:172); ಆದಕಾರಣ ಪ್ರೀತಿಯಿಂದಲೇ ಧರ್ಮಪ್ರಮಾಣವು ನೆರವೇರುತ್ತದೆ. (ರೋಮಾಯ 13:10). ನೀತಿ ಯು ಪ್ರೀತಿಯೇ, ಮತ್ತು ಪ್ರೀತಿಯು ದೈವಜ್ಯೋತಿಯೂ ಜೀವವೂ ಆಗಿದೆ. ದೇವರ ನೀತಿಯು ಕ್ರಿಸ್ತನಲ್ಲಿ ಮೂರ್ತೀಕರಿಸಿದೆ. ಆದುದರಿಂದ ನಾವು ಕ್ರಿಸ್ತನನ್ನು ಅಂಗೀಕರಿಸಿಕೊಳ್ಳುವುದರಿಂದ ನೀತಿಯನ್ನೂ ಪಡೆಯುತ್ತೇವೆ.MBK 22.4

    ಶ್ರಮೆಯಿಂದ ಹೋರಾಡುವುದರಿಂದಲೂ ಅಥವಾ ಹಂಬಲದಿಂದ ದುಡಿಯುವುದರಿಂದಲೂ, ದಾನಧರ್ಮ ಅಥವಾ ಯಜ್ಞ ಬಲಿ ಮುಂತಾದುವುಗಳಿಂದಲೂ ನೀತಿಯನ್ನು ಹೊಂದಲು ಅಸಾಧ್ಯ; ಆದರೆ ಅದಕ್ಕಾಗಿ ಹಸಿದು ಬಾಯಾರಿದವರಿಗೆ ಉಚಿತವಾಗಿ ಕೊಡಲ್ಪಡುತ್ತದೆ. “ಎಲೈ ಬಾಯಾರಿದ ಸಕಲ ಜನರೇ, ನೀರಿನ ಬಳಿಗೆ ಬನ್ನಿರಿ, ಹಣವಿಲ್ಲದವನೂ ಸಹ ಬರಲಿ! ಬನ್ನಿರಿ ಕೊಂಡುಕೊಳ್ಳಿರಿ ಉಣ್ಣಿರಿ! ………ಹಣ ಕೊಡದೆ ಕ್ರಯವಿಲ್ಲದೆ ತೆಗೆದುಕೊಳ್ಳಿರಿ.” “ನಾನು ದಯಪಾಲಿಸುವ ಸದ್ಧರ್ಮಫಲವೂ ಆಗಿದೆ ಎಂದು ಯೆಹೋವನು ಅನ್ನುತ್ತಾನೆ,” “ಯೆಹೋವಚಿದ್ಕೇನು [ಅಂದರೆ ಯೆಹೋವನೇ ನಮ್ಮ ಸದ್ಧರ್ಮ] ಎಂಬ ಹೆಸರು ಅವನಿಗಾಗುವುದು” ಯೆಶಾಯ 55:1; 54:17; ಯೆರೆಮೀಯ 23:6.MBK 23.1

    ಆತ್ಮದ ಹಸಿವು ತೃಷೆಗಳನ್ನು ಮಾನವ ಕಲ್ಪನೆಗಳಾವುವೂ ನಿವಾರಿಸಲಾರವು. ಆದರೆ ಯೇಸುವು ಹೇಳುವುದೇನೆಂದರೆ: “ಇಗೋ ಬಾಗಿಲಲ್ಲಿ ನಿಂತುಕೊಂಡು ತಟ್ಟುತ್ತಾ ಇದ್ದೇನೆ; ಯಾವನಾದರೂ ನನ್ನ ಶಬ್ದವನ್ನು ಕೇಳಿ ಬಾಗಿಲನ್ನು ತೆರೆದರೆ ನಾನು ಒಳಗೆ ಬಂದು ಅವನ ಸಂಗಡ ಊಟಮಾಡುವೆನು, ಅವನು ನನ್ನ ಸಂಗಡ ಊಟಮಾಡುವನು.” “ಜೀವಕೊಡುವ ರೊಟ್ಟಿ ನಾನೇ; ನನ್ನ ಬಳಿಗೆ ಬರುವವನಿಗೆ ಎಂದಿಗೂ ಹಸಿಬೆಯಾಗುವುದಿಲ್ಲ, ನನ್ನನ್ನು ನಂಬುವವನಿಗೆ ಎಂದಿಗೂ ನೀರಡಿಕೆಯಾಗುವುದಿಲ್ಲ.” ಪ್ರಕಟನೆ 3:20; ಯೋಹಾನ 6:35.MBK 24.1

    ದೈಹೀಕ ಶಕ್ತಿಯನ್ನು ಪೋಷಿಸಲು ಆಹಾರವು ನಮಗೆ ಹೇಗೆ ಅವಶ್ಯಕವೋ ಹಾಗೆಯೇ ನಮ್ಮ ಆತ್ಮೀಯ ಜೀವನ ಪೋಷಣೆಗೂ ಮತ್ತು ದೈವಸೇವೆಯನ್ನು ಮಾಡಲು ಶಕ್ತಿಗಾಗಿಯೂ ಪರಲೋಕದ ಜೀವರೊಟ್ಟಿಯಾದ ಕ್ರಿಸ್ತನು ನಮಗೆ ಅವಶ್ಯ. ಜೀವಚೈತನ್ಯಗಳಿಗೆ ಆಧಾರವಾದ ಪೋಷಣೆಯನ್ನು ದೇಹವು ಸದಾ ಹೊಂದುವಂತೆ ನಮ್ಮ ಆತ್ಮವೂ ಸಹ ಕ್ರಿಸ್ತನ ಮೇಲೆ ಸಂಪೂರ್ಣ ಆಧಾರಗೊಂಡು ಆತನಿಗೆ ನಮ್ಮನ್ನು ಒಪ್ಪಿಸಿಕೊಟ್ಟು ಅಡಬಿಡದೆ ಆತನೊಡನೆ ಅನ್ಯೋನ್ಯವಾಗಿರಬೇಕು.MBK 24.2

    ಬಳಲಿದ ಪ್ರಯಾಣಿಕನು ಮರುಭೂಮಿಯಲ್ಲಿ ನೀರಿನ ಒರತೆಗಳಿಗಾಗಿ ಕಾತರಿಸುತ್ತಾ ಕಂಡುಕೊಂಡು ತನ್ನ ಉಗ್ರತೃಷೆಯನ್ನು ನೀಗುವಂತೆ ಕ್ರೈಸ್ತರೂ ಶುದ್ಧ ಜೀವಜಲಕ್ಕಾಗಿ ಬಾಯಾರಿ ಉಕ್ಕುವ ಒರತೆಯಾದ ಕ್ರಿಸ್ತನನ್ನು ಕಂಡುಕೊಳ್ಳೂವರು. MBK 24.3

    ನಮ್ಮ ರಕ್ಷಕನ ಗುಣಗಳ ಸಮಗ್ರತೆಯನ್ನು ನಾವು ವಿವೇಚಿಸುವಾಗ್ಗೆ ಆತನ ಪರಿಶುದ್ಧತ್ವದ ಪುತ್ಥಳಿಯಂತೆ ನಾವೂ ಸಂಪೂರ್ಣವಾಗಿ ಮಾರ್ಪಟ್ಟು ಪುನರುಜ್ಜೀವನಗೊಳ್ಳಲು ಆಶಿಸುತ್ತೇವೆ. ನಾವು ದೇವರನ್ನು ಹೆಚ್ಚೆಚ್ಚಾಗಿ ಅರಿತುಕೊಳ್ಳೂವಷ್ಟೂ, ನಮ್ಮ ಗುಣಗಳ ಆದರ್ಶಧ್ಯೇಯವೂ ಔನ್ನತ್ಯವನ್ನು ಹೊಂದಿ ಆತನ ಸಾರೂಪ್ಯವನ್ನು ಪ್ರತಿಬಿಂಬಿಸಬೇಕೆಂಬ ಹಂಬಲಿಕೆಯು ಸ್ಫೂರ್ತಿಗೊಳ್ಳುತ್ತದೆ. ನಮ್ಮ ಆತ್ಮವು ದೇವರ ಬಳಿಗೈದಲು ಪ್ರಯತ್ನಿಸುವಾಗ ದೈವೀಕ ಶಕ್ತಿಯು ಮಾನವಶಕ್ತಿಯೊಡಗೂಡಿ, “ನನ್ನ ಮನವೇ ದೇವರನ್ನೇ ನಂಬಿ ಶಾಂತವಾಗಿರು. ನನ್ನ ನಿರೀಕ್ಷೆ ಯು ನೆರವೇರುವುದು ಆತನಿಂದಲೇ” ಕೀರ್ತನೆ 62:5. ಎಂದು ನಮ್ಮ ಹಂಬಲಿಕೆಯಿಂದ ಕೂಡಿದ ಹೃದಯವು ಹೇಳಬಲ್ಲುದು. MBK 24.4

    ನಿನ್ನ ಆತ್ಮದ ಕೊರತೆಯು ಅಂತರ್ಬೋಧೆಯಾದರೆ ಮತ್ತು ನೀನು ನೀತಿಗಾಗಿ ಹಸಿದು ಬಾಯಾರಿದರೆ ಇದನ್ನು ಕ್ರಿಸ್ತನು ತಾನೇ ತನ್ನ ಆತ್ಮನ ಶಕ್ತಿಯ ಮೂಲಕ ಮಾಡಿದ್ದಾನೆಂದು ವ್ಯಕ್ತವಾಗುತ್ತದೆ. ನಿನ್ನ ಶಕ್ತಿಯಿಂದ ನೀನೇ ಮಾಡಲಾಗದ ಕಾರ್ಯಗಳನ್ನು ಆತನು ನಿನಗಾಗಿ ಮಾಡಿಕೊಡುವಂತೆ ಆತನನ್ನು ಹುಡುಕಲು ನಿನ್ನ ಹೃದಯವನ್ನು ಪ್ರೇರೇಪಿಸಿದವನು ಆತನೇ. ನಾವು ಆಳವಿಲ್ಲದ ತೊರೆಯಲ್ಲಿ ನಮ್ಮ ದಾಹವನ್ನು ಶಮನಪಡಿಸಿಕೊಳ್ಳಲು ಪ್ರಯತ್ನಿಸುವ ಅವಶ್ಯವಿಲ್ಲ; ಯಾಕಂದರೆ ಮಹಾ ಜೀವಜಲದ ಬುಗ್ಗೆಯು ನಮ್ಮ ಮುಂದೆಯೇ ಇದೆ. ವಿಶ್ವಾಸದ ಮಾರ್ಗದಲ್ಲಿ ನಾವು ತುಸು ಮೇಲೆ ಹೋದರೆ ಅದರಲ್ಲಿ ಉಚಿತವಾಗಿ ಯಥೇಷ್ಟವಾಗಿ ಕುಡಿಯಬಹುದು.MBK 25.1

    ದೇವರ ವಾಕ್ಯಗಳು ಜೀವಕೊಡುವ ಒರತೆಗಳಾಗಿವೆ. ನೀನು ಆ ಜೀವದಾಯಕ ಚಿಲುಮೆಯನ್ನು ಅನುಸರಿಸಿದರೆ, ಪರಿಶುದ್ಧಾತ್ಮನ ಮೂಲಕವಾಗಿ, ಕ್ರಿಸ್ತನೊಡನೆ ಅನ್ಯೋನ್ಯವಾಗುತ್ತಯೆ. ಆಗ ನಿನಗೆ ಸಾಧಾರಣವಾಗಿ ಪರಿಚಯವುಳ್ಳ ಸತ್ಯಾಂಶಗಳು ಹೊಸ ಆಕಾರದಲ್ಲಿ ನಿನ್ನ ಮನಸ್ಸಿಗೆ ಗೋಚರವಾಗುತ್ತವೆ; ಸತ್ಯವೇದ ವಚನಗಳು ಹೊಸ ಅರ್ಥಗಳಿಂದ ಕೂಡಿ ವಿದ್ಯುತ್ಪುಂಜದಂತೆ ಹೊರಹೊಮ್ಮುವುವು; ರಕ್ಷಣೆಯ ಕಾರ್ಯಕ್ಕೂ ಮತ್ತು ಇತರ ಸತ್ಯಾಂಶಗಳಿಗೂ ಇರುವ ನಿಕಟ ಸಂಬಂಧವನ್ನು ಕಂಡುಕೊಂಡು ದೈವಗುರುವು ನಿನ್ನ ಪಕ್ಕದಲ್ಲಿದ್ದಾನೆಂದೂ, ಕ್ರಿಸ್ತನೇ ನಿನ್ನನ್ನು ನಡಿಸುತ್ತಿದ್ದಾನೆಂದೂ ಅರಿತುಕೊಳ್ಳುವಿ.MBK 25.2

    “ನಾನು ಕೊಡುವ ನೀರನ್ನು ಕುಡಿದವನಿಗೆ ಎಂದಿಗೂ ನೀರಡಿಕೆಯಾಗುವುದಿಲ್ಲ; ನಾನು ಅವನಿಗೆ ಕೊಡುವ ನೀರು ಅವನಲ್ಲಿ ಉಕ್ಕುವ ಒರತೆಯಾಗಿದ್ದು ನಿತ್ಯ ಜೀವವನ್ನುಂಟುಮಾಡುವುದು.” ಯೋಹಾನ 4:14 ಎಂದು ಯೇಸುವು ನುಡಿದನು. ಸತ್ಯಗಳನೆಲ್ಲಾ ಪರಿಶುದ್ಧಾತ್ಮನು ನಿನಗೆ ಗೋಚರಪಡಿಸುವಾಗ ನೀನು ಅತ್ಯಾಮೂಲ್ಯವಾದ ಅನುಭವಗಳನ್ನು ಶೇಖರಿಸಿ, ನಿನಗೆ ಗೋಚರಿಸಲ್ಪಟ್ಟ ಸಮಾಧಾನವನ್ನು ಇತರರಿಗೆ ಹೇಳಲು ನೀನು ತವಕಗೊಳ್ಳುವಿ. ಅವರೊಡನೆ ಒಡನಾಡುವಾಗ, ಕ್ರಿಸ್ತನ ಸೇವೆಯ ಲಕ್ಷಣದ ವಿಷಯವನ್ನು ಕುರಿತಾದ ಕೆಲವು ನೂತನ ವಿಚಾರಗಳನ್ನು ಅವರಿಗೆ ಅರುಹುವಿ. ಆತನನ್ನು ಪ್ರೀತಿಸುವವರಿಗೂ ಪ್ರೀತಿಸದವರಿಗೂ ತಿಳಿಸಲು ಆತನ ದಯಾಪೂರಿತ ಪ್ರೀತಿಯು ನಿನಗೆ ಹೊಸದಾಗಿ ಪ್ರಕಟವಾಗುವುದು.MBK 25.3

    “ಕೊಡಿರಿ, ಆಗ ನಿಮಗೂ ಕೊಡಲ್ಪಡುವುದು” (ಲೂಕ 6:38); ಯಾಕಂದರೆ ದೇವರ ವಾಕ್ಯವು “ಉದ್ಯಾನಗಳಿಗೆ ಹರಿಯುವ ಬುಗ್ಗೆ, ಉಕ್ಕುತ್ತಿರುವ ಬಾವಿ, ಲೆಬನೋನಿನಿಂದ ಹರಿಯುವ ಪ್ರವಾಹ” (ಪರಮಗೀತ 4:15). ಒಮ್ಮೆ ಕ್ರಿಸ್ತನ ಪ್ರೀತಿಯನ್ನು ರುಚಿಸಿರುವ ಹೃದಯವು, ನಿರಂತರವೂ ಎಡೆಬಿಡದೆ ಪೂರ್ಣಪಾನಕ್ಕಾಗಿ ಹಾತೊರೆಯುತ್ತದೆ; ಮತ್ತು ನೀನು ಇತರರಿಗೆ ಇದನ್ನು ಕೊಡುವಷ್ಟೂ ಹೆಚ್ಚಾಗಿಯೂ ಯಥೇಷ್ಟವಾಗಿಯೂ ಹೊಂದುವಿ. ಆತ್ಮಕ್ಕೆ ಗೋಚರವಾದ ಪ್ರತಿಯೊಂದು ದೈವಪ್ರಕಟನೆಯೂ ನಾವು ಹೆಚ್ಚಾಗಿ ಅರಿತುಕೊಳ್ಳುವಂತೆಯೂ ಮತ್ತು ಪ್ರೀತಿಸುವಂತೆಯೂ ನಮ್ಮ ಸಾಮರ್ಥ್ಯವನ್ನು ವಿಕಾಸಗೊಳಿಸುತ್ತದೆ. ಹೃದಯದ ನಿರಂತರವಾದ ಮೊರೆಯೇನಂದರೆ: “ನಿನ್ನಿಂದ ಇನ್ನೂ ಅಧಿಕವಾಗಿ,” ಇದಕ್ಕೆ ಪವಿತ್ರಾತ್ಮನ ನಿತ್ಯವಾದ ಉತ್ತರವೇನಂದರೆ “ಮತ್ತೂ ಅಧಿಕವಾಗಿ” ರೋಮಾಯ 5:9,10. ಯಾಕಂದರೆ ದೇವರು “ನಾವು ಬೇಡುವುದಕ್ಕಿಂತಲೂ ಯೋಚಿಸುವುದಕ್ಕಿಂತಲೂ ಅತ್ಯಧಿಕವಾದದ್ದನ್ನು ಮಾಡಲು ಶಕ್ತಿಯುಳ್ಳವನಾಗಿದ್ದಾನೆ.” ಎಫೆಸ 3:20, ಮತ್ತು ಅದರಲ್ಲಿ ಆನಂದಿಸುತ್ತಾನೆ. ಮಾನವರ ರಕ್ಷಣಾರ್ಥವಾಗಿ ತನ್ನನ್ನೇ ಬರಿದು ಮಾಡಿಕೊಂಡ ಯೇಸುವಿಗೆ ಪವಿತ್ರಾತ್ಮನು ಅಳತೆಯಿಲ್ಲದೆ ಕೊಡಲ್ಪಟ್ಟನು. ಹಾಗೆಯೇ ಆತನ ವಾಸಕ್ಕಾಗಿ ತಮ್ಮ ಹೃದಯಗಳನ್ನು ಸಂಪೂರ್ಣವಾಗಿ ಒಪ್ಪಿಸಿಕೊಡುವ ಪ್ರತಿಯೊಬ್ಬ ಕ್ರಿಸ್ತ ಹಿಂಬಾಲಕನಿಗೂ ಕೊಡಲ್ಪಡುವುದು. “ಪವಿತ್ರಾತ್ಮ ಭರಿತರಾಗಿರ್ರಿ” (ಎಫೆಸ 5:18), ಎಂದು ನಮ್ಮ ಕರ್ತನು ತಾನೇ ಆಜ್ಞಾಪಿಸಿದ್ದಾನೆ, ಮತ್ತು ಈ ಆಜ್ಞೆಯು ಅದರ ನೆರವೇರಿಕೆಯ ವಾಗ್ದಾನವೂ ಆಗಿದೆ. “ಆತನಲ್ಲಿ (ಕ್ರಿಸ್ತನಲ್ಲಿ) ತನ್ನ ಸಂಪೂರ್ಣತೆಯು ವಾಸವಾಗಿರಬೇಕೆಂದೂ” “ಮತ್ತು ನೀವು ಆತನಲ್ಲಿದ್ದುಕೊಂಡೇ ಪರಿಪೂರ್ಣತೆಯನ್ನು ಹೊಂದಿದವರಾಗಬೇಕೆಂಬುದೂ” ಕೊಲೊ. 1:19; 2:10, ತಂದೆಯಾದ ದೇವರ ಆನಂದವಾಗಿತ್ತು.MBK 26.1

    ದೇವರು ತನ್ನ ಪ್ರೀತಿಯನ್ನು, ಭೂಮಿಯನ್ನು ನವಚೇತನಗೊಳಿಸುವ ಮಳೆಯಂತೆ ಮಿತಿಯಿಲ್ಲದೆ ಸುರಿಸಿದ್ದಾನೆ. ಆತನು ಹಳುವುದೇನಂದರೆ: “ಆಕಾಶಮಂಡಲವೇ, ಮೇಲಿನಿಂದ ಧರ್ಮರಸವನ್ನು ವರ್ಷಿಸು, ಗಗನವು ಸುರಿಸಲಿ; ಭೂಮಿಯು ಒಡೆದು ರಕ್ಷಣೆಯನ್ನು ಮೊಳೆಯಿಸಿ ಅದರೊಡನೆ ನೀತಿಫಲವನ್ನು ಬೆಳೆಯಿಸಲಿ” “ಬಾಯಾರಿ ನಾಲಿಗೆ ಒಣಗಿ ನೀರನ್ನು ಹುಡುಕಿ ಹೊಂದದ ದೀನದರಿದ್ರರಿಗೆ ಯೆಹೋವನೆಂಬ ನಾನು ಪ್ರಸನ್ನನಾಗುವೆನು, ಇಸ್ರಾಯೇಲಿನ ದೇವರಾದ ನಾನು ಅವರನ್ನು ಕೈಬಿಡೆನು. ಬೋಳುಗುಡ್ಡಗಳಲ್ಲಿ ನದಿಗಳನ್ನೂ, ತಗ್ಗುಗಳಲ್ಲಿ ಒರತೆಗಳನ್ನೂ ಹೊರಡಿಸಿ ಅರಣ್ಯವನ್ನು ಕೆರೆಯಾಗಿಯೂ ಮರುಭೂಮಿಯನ್ನು ಬುಗ್ಗೆಗಳಾಗಿಯೂ ಮಾಡುವೆನು” ಯೆಶಾಯ 45:8; 41:17, 18. “ನಾವೆಲ್ಲರೂ ಆತನ ಸಂಪೂರ್ಣತೆಯೊಳಗಿಂದ ಕೃಪೆಯ ಮೇಲೆ ಕೃಪೆಯನ್ನು ಹೊಂದಿದೆವು” ಯೋಹಾನ 1:16.MBK 26.2