Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಉಡುಪಿನ ವಿಧಾನದ ಪ್ರಭಾವಗಳು

    ಉಡುಪಿನ ಬಗ್ಗೆ ಇರುವ ವ್ಯಾಮೋಹವು ನೈತಿಕತೆಗೆ ಅಪಾಯ ತರುತ್ತದೆ. ಅದರಲ್ಲಿಯೂ ಕ್ರೈಸ್ತ ಮಹಿಳೆಯರ ವಿಶೇಷ ಗುಣಗಳಾದ ನಮ್ರತೆ, ನಿರಾಡಂಬರತೆ, ವಿನಯಶೀಲತೆ, ಸರಳ ಗಾಂಭೀರ್ಯಗಳಿಗೆ ಇದು ತದ್ವಿರುದ್ಧವಾದದ್ದು. ಆಡಂಬರದ ಹಾಗೂ ದುಂದುವೆಚ್ಚದ ಉಡುಪುಗಳು ಅದನ್ನು ಧರಿಸುವವರ ಮನಸ್ಸಿನಲ್ಲಿ ಭೋಗಾಪೇಕ್ಷೆ ಅಂದರೆ ಇಂದ್ರಿಯಗಳ ಆಸೆಗಳನ್ನು ಉತ್ತೇಜಿಸುತ್ತದೆ ಮತ್ತು ನೋಡುವವರಲ್ಲಿ ನಿಜವಾದ ಕಾಮಾಭಿಲಾಷೆ ಉಂಟು ಮಾಡುತ್ತದೆ. ಉಡುಪಿನ ವಿಷಯದಲ್ಲಿ ಅಹಂಕಾರ ಪಡುವುದು ಮತ್ತು ಆಡಂಬರದ ಪ್ರದರ್ಶನ ಮಾಡುವುದು ಮಹಿಳೆಯರು ತಮ್ಮ ನಡತೆ ಹಾಳು ಮಾಡಿಕೊಳ್ಳುವುದಕ್ಕೆ ಒಂದು ಕಾರಣವಾಗಿದೆ. ಬಹುಬೆಲೆಬಾಳುವ ಬಟ್ಟೆಗಳು ಒಳ್ಳೆಯದನ್ನು ಮಾಡಬೇಕೆಂಬ ಬಯಕೆಯನ್ನು ತಡೆಯುತ್ತದೆ.KanCCh 215.2

    ಶ್ರೀಮತಿವೈಟಮ್ಮನವರು ಕ್ರೈಸ್ತಯುವತಿಯರು ಸರಳವಾದ ಹಾಗೂ ನಿರಾಡಂಬರವಾದ ಉಡುಪು ಧರಿಸಬೇಕೆಂದು ಸಲಹೆ ನೀಡುತ್ತಾರೆ. ಸರಳವಾದ ನಿಮ್ಮ ಉಡುಪು ಮತ್ತು ನಡತೆಯ ಮೂಲಕ ನೀವು ಕ್ರಿಸ್ತನ ಬೆಳಕನ್ನು ಇತರರ ಮುಂದೆ ಉತ್ತಮವಾಗಿ ಪ್ರಕಾಶಿಸಬಹುದು. ಪರಲೋಕದ ನಿತ್ಯವಾದ ವಸ್ತುಗಳಿಗೆ ಹೋಲಿಸಿದಾಗ, ಈ ಲೋಕದ ವಿಷಯಗಳಿಗೆ ಹೆಚ್ಚಿನ ಮಹತ್ವ ಕೊಡುವುದಿಲ್ಲವೆಂದು ನೀವು ಇತರರಿಗೆ ಇದರಿಂದ ತೋರಿಸಬಹುದು.KanCCh 215.3

    ಕ್ರೈಸ್ತರಲ್ಲಿ ಅನೇಕರು ಅವಿಶ್ವಾಸಿಗಳ ಮೇಲೆ ಪ್ರಭಾವ ಬೀರುತ್ತೇವೆಂದು ನೆನಸಿ ಲೌಕಿಕವಾದ ರೀತಿಯಲ್ಲಿ ಆಡಂಬರದ ಉಡುಪು ಧರಿಸುತ್ತಾರೆ. ಆದರೆ ಅವರು ಇದರಲ್ಲಿ ತಪ್ಪು ಮಾಡುತ್ತಾರೆ. ಅವರು ನಿಜವಾಗಿಯೂ ಅನ್ಯರನ್ನು ರಕ್ಷಣೆಗೆ ತರಬೇಕೆಂದು ಪ್ರಭಾವಬೀರಲು ಪ್ರಯತ್ನಿಸಿದಲ್ಲಿ, ತಮ್ಮ ಕೆಲಸದಸ್ಥಳದಲ್ಲಿ ಪ್ರಾಮಾಣಿಕರಾಗಿರಲಿ, ತಮ್ಮ ನೀತಿ, ಧರ್ಮದ ಕಾರ್ಯಗಳಲ್ಲಿ ವಿಶ್ವಾಸ ಹೊಂದಿ ಕ್ರೈಸ್ತರು ಮತ್ತು ಇತರರ ನಡುವಣ ವ್ಯತ್ಯಾಸವನ್ನು ಈ ರೀತಿಯಲ್ಲಿ ಸ್ಪಷ್ಟವಾಗಿ ತೋರಿಸಲಿ. ಅವರ ಮಾತು, ಕ್ರಿಯೆಗಳು ಮತ್ತು ಉಡುಪು ದೇವರ ಬಗ್ಗೆ ತಿಳಿಸಬೇಕು. ಆಗ ಕ್ರೈಸ್ತರ ನೆರೆಹೊರೆಯವರ ಮೇಲೆ ಒಂದು ಪರಿಶುದ್ಧ ಪ್ರಭಾವ ಕಂಡುಬರುವುದು ಹಾಗೂ ಅವಿಶ್ವಾಸಿಗಳೂ ಸಹ ಇವರು ಕ್ರಿಸ್ತನ ನಿಜ ಹಿಂಬಾಲಕರೆಂದು ಅರಿತುಕೊಳ್ಳುವರು.KanCCh 216.1

    ಅಡ್ರೆಂಟಿಸ್ಟ್ ಕ್ರೈಸ್ತ ಸಹೋದರಿಯರು ಕೆಟ್ಟದಾಗಿ ಕಾಣಿಸಿಕೊಳ್ಳಬಾರದೆಂದು ಶ್ರೀಮತಿ ವೈಟಮ್ಮನವರು ಎಚ್ಚರಿಸುತ್ತಾರೆ. ಭ್ರಷ್ಟತೆ, ಅಧರ್ಮ ತುಂಬಿರುವ ಆಧುನಿಕ ಯುಗದಲ್ಲಿ ನೀವು ನಿಮ್ಮ ಎಚ್ಚರಿಕೆಯಲ್ಲಿದ್ದಲ್ಲಿ ಸುರಕ್ಷಿತರಾಗಿರುವಿರಿ. ಈ ಕಾಲದಲ್ಲಿ ಸದ್ಗುಣ ಹಾಗೂ ನಮ್ರತಾ ಸ್ವಭಾವವು ಕಂಡುಬರುವುದು ವಿರಳ. ಆದುದರಿಂದ ಕ್ರಿಸ್ತನ ಅನುಯಾಯಿಗಳಾದ ಯುವತಿಯರಾದ ನೀವು ಈ ಮೇಲೆ ತಿಳಿಸಿದ ಉತ್ತಮ ಗುಣಗಳನ್ನು ಅಮೂಲ್ಯವಾದ ಹಾಗೂ ಬೆಲೆಕಟ್ಟಲಾಗದ ರತ್ನದಂತೆ ಕಾಪಾಡಿಕೊಳ್ಳಬೇಕೆಂದು ಶ್ರೀಮತಿ ವೈಟಮ್ಮನವರು ಸಲಹೆ ನೀಡುತ್ತಾರೆ.KanCCh 216.2

    ಉಡುಪಿನಲ್ಲಿ ಶುದ್ಧವಾದ ಸರಳತೆಯೊಂದಿಗೆ ನಡತೆಯಲ್ಲಿ ನಮ್ರತೆ ಮತ್ತು ಸಂಯಮದಿಂದ ಇರುವ ಮಿತಭಾಷಿಗಳಾದ ಯುವತಿಯರು ಅನೇಕ ಅಪಾಯಗಳಿಂದ ತಮ್ಮನ್ನು ರಕ್ಷಿಸಿಕೊಳ್ಳುವರು. ಈ ಗುಣಗಳು ಅವರನ್ನು ಗುರಾಣಿಯಂತೆ ಕಾಪಾಡುವವು. ಅನೇಕರು ಈ ಆಧುನಿಕ ಯುಗಕ್ಕೆ ತಕ್ಕಂತೆ ವಿವೇಚನೆಯಿಲ್ಲದೆ, ಅರ್ಥವಿಲ್ಲದ ಫ್ಯಾಷನ್‌ಗೆ ಒಲಿದು ಸಹಜವಾದ ಸರಳತೆಯನ್ನು ಬಿಟ್ಟು, ಕೃತಕವಾದವುಗಳಿಗೆ ಮರುಳಾಗುತ್ತಿದ್ದಾರೆ. ಅವರು ತಮ್ಮ ಸಮಯ, ಹಣ, ಬುದ್ಧಿವಂತಿಕೆಯ ಚೈತನ್ಯ ಇವೆಲ್ಲವನ್ನೂ ವ್ಯರ್ಥವಾಗಿ ಬಳಸಿಕೊಂಡು ಆಡಂಬರದ ಮತ್ತು ಫ್ಯಾಷನ್‌ಗಾರಿಕೆಗೆ ತಮ್ಮ ಸಂಪೂರ್ಣ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ.KanCCh 216.3

    ಪ್ರಿಯ ಯುವತಿಯರೇ, ಈ ಆಧುನಿಕ ಯುಗಕ್ಕೆ ಅನುಗುಣವಾಗಿ ಉಡುಪು ಧರಿಸಬೇಕೆಂಬ ಬಯಕೆ, ಬೆಳ್ಳಿ ಬಂಗಾರ ಮತ್ತು ಕೃತಕ ವಸ್ತುಗಳಿಂದ ಆಡಂಬರದ ಪ್ರದರ್ಶನ ಮಾಡುವುದರಿಂದ ಇತರರು ಕ್ರೈಸ್ತಧರ್ಮ ಮತ್ತು ಸತ್ಯಕ್ಕೆ ಆಕರ್ಷಿತರಾಗುವುದಿಲ್ಲ. ಹೊರಗೆ ಸುಂದರವಾಗಿ ಕಾಣಬೇಕೆಂಬ ನಿಮ್ಮ ಪ್ರಯತ್ನವನ್ನು ನೀವು ದುರ್ಬಲ ಮತ್ತು ಹೆಮ್ಮೆಯ ಮನಸ್ಸುಳ್ಳವರೆಂದು ಬುದ್ಧಿವಂತರಾದ ಇತರರು ಶೀಘ್ರದಲ್ಲಿಯೇ ಮನವರಿಕೆ ಮಾಡಿಕೊಳ್ಳುವರು.KanCCh 216.4

    ಪ್ರತಿಯೊಂದು ಮಗು ಮತ್ತು ಯೌವನಸ್ಥರು ಮುಗ್ಧತೆಯಿಂದ ಹುಡುಕುವ ಒಂದು ಉಡುಪಿದೆ. ಅದು ದೇವಭಕ್ತರ ನೀತಿಯೆಂಬವಸ್ತ್ರ, ಲೋಕದ ಸಮಾಜದಂತೆ ಕ್ರೈಸ್ತರು ಅತ್ಯಾಧುನಿಕ ಫ್ಯಾಷನ್ನಿನ ಬಟ್ಟೆಗಳನ್ನು ಪಡೆದುಕೊಳ್ಳಲು ಪ್ರಯತ್ನಿಸಿದಂತೆ, ಕ್ರಿಸ್ತನ ನೀತಿಯೆಂಬ, ವಸ್ತ್ರವನ್ನು ಪಡೆದುಕೊಳ್ಳಲು ಹಂಬಲಿಸಿದಲ್ಲಿ, ಅವರು ಶೀಘ್ರದಲ್ಲಿಯೇ ಅದನ್ನು ಪಡೆದುಕೊಳ್ಳುವರು ಹಾಗೂ ಅವರ ಹೆಸರುಗಳು ಜೀವಬಾಧ್ಯರ ಪಟ್ಟಿಯಿಂದ ತೆಗೆಯಲ್ಪಡುವುದಿಲ್ಲ. ತಾಯಂದಿರು, ಯುವತಿಯರು, ಮಕ್ಕಳು ಸೇರಿದಂತೆ ಎಲ್ಲರೂ ಸಹ “ದೇವರೇ, ನನ್ನಲ್ಲಿ ಶುದ್ಧ ಹೃದಯವನ್ನು ನಿರ್ಮಿಸು; ನನಗೆ ಸ್ಥಿರಚಿತ್ತವನ್ನು ಅನುಗ್ರಹಿಸಿ ನನ್ನನ್ನು ನೂತನ ಪಡಿಸು” ಎಂದು ಬೇಡಿಕೊಳ್ಳಬೇಕಾದ ಅಗತ್ಯವಿದೆ (ಕೀರ್ತನೆ 51:10). ಶುದ್ಧವಾದ ಹೃದಯ ಮತ್ತು ಆತ್ಮವು ಈ ಲೋಕದಲ್ಲಿ ಮಾತ್ರವಲ್ಲ, ಪರಲೋಕದಲ್ಲಿಯೂ ಬಂಗಾರಕ್ಕಿಂತಲೂ ಅಮೂಲ್ಯವಾದದ್ದು, ನಿರ್ಮಲಚಿತ್ತರು ಅಂದರೆ ಶುದ್ಧ ಹೃದಯವುಳ್ಳವರು ಮಾತ್ರ ದೇವರನ್ನು ನೋಡುವರು.KanCCh 217.1

    *****