Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಕ್ರಿಸ್ತನು ಮತ್ತು ಸೈತಾನನ ನಡುವಣ ಮಹಾಹೋರಾಟದ ದರ್ಶನ

    1858ನೇ ಇಸವಿ ಮಾರ್ಚ್‍ತಿಂಗಳ ಮಧ್ಯಭಾಗದ ಒಂದು ಭಾನುವಾರದ ಮಧ್ಯಾಹ್ನ ಅಮೇರಿಕಾ ದೇಶದ ಪೂರ್ವಭಾಗದ ಒಂದು ಹಳ್ಳಿಯ ಮನೆಯಲ್ಲಿ ನೂರಾರು ಜನರು ಕೂಡಿಬಂದಿದ್ದರು. ಮರಣಹೊಂದಿದ ಒಬ್ಬ ಯೌವನಸ್ಥನ ಅಂತ್ಯಕ್ರಿಯೆಯಲ್ಲಿ ಹಿರಿಯರಾದ ಜೇಮ್ಸ್ ವೈಟ್‍ರವರು ಸಂದೇಶ ನೀಡಿದರು. ಅವರ ಸಂದೇಶ ಮುಗಿದ ನಂತರ ಶ್ರೀಮತಿ ವೈಟಮ್ಮನವರು ದುಃಖಿತರಾಗಿದ್ದ ಜನರಿಗೆ ಸಾಂತ್ವನದ ಮಾತುಗಳನ್ನಾಡಲು ಬಯಸಿದರು. ಅವರು ಒಂದೆರಡು ನಿಮಿಷ ಮಾತಾಡಿದ ನಂತರ ಸ್ವಲ್ಪಹೊತ್ತು ಮೌನವಾಗಿದ್ದರು. ಶ್ರೀಮತಿ ವೈಟಮ್ಮನವರ ಮಾತುಗಳನ್ನು ಕೇಳಲು ಜನರು ಆಸಕ್ತಿಯಿಂದ ಕಾದುಕೊಂಡಿದ್ದರು. ಮೂರು ಸಾರಿ ಪ್ರವಾದಿನಿಯವರು “ದೇವರಿಗೆ ಮಹಿಮೆ!” ಎಂದು ಹೇಳಿದಾಗ ಜನರಿಗೆ ಗಲಿಬಿಲಿಯಾಯಿತು. ಆದರೆ ಶ್ರೀಮತಿ ವೈಟಮ್ಮನವರಿಗೆ ದೇವದರ್ಶನವಾಗಿತ್ತು.KanCCh .0

    ಹಿರಿಯರಾದ ಜೇಮ್ಸ್ ವೈಟ್‍ರವರು ತಮ್ಮ ಪತ್ನಿಯಾದ ಶ್ರೀಮತಿ ವೈಟಮ್ಮನವರು 17 ವರ್ಷದ ಯುವತಿಯಾಗಿದ್ದಾಗ ನೋಡಿದ ದರ್ಶನದ ಸಹಿತ ಎಲ್ಲವನ್ನೂ ಅಂತ್ಯಕ್ರಿಯೆಗೆ ಕೂಡಿಬಂದಿದ್ದ ಜನರಿಗೆ ತಿಳಿಸಿದರು. ಆಕೆಯ ಕಣ್ಣುಗಳು ತೆರೆದಿದ್ದರೂ, ಅವರ ಸುತ್ತಲೂ ನಡೆಯುತ್ತಿರುವ ವಿಷಯಗಳ ಬಗ್ಗೆ ಆಕೆಗೆ ಏನೂ ತಿಳಿದಿಲ್ಲವೆಂದು ಶ್ರೀ ಜೇಮ್ಸ್‍ವೈಟ್ ತಿಳಿಸಿದರು. ಪ್ರವಾದಿಯಾದ ಬಿಳಾಮನು ಪರವಶನಾಗಿ ಕಣ್ಣು ತೆರೆದು ಸರ್ವಶಕ್ತನ ದರ್ಶನಹೊಂದಿದ ವಿಷಯವನ್ನು ಅವರು ನೆರೆದಿದ್ದ ಜನರಿಗೆ ತಿಳಿಸಿದರು (ಅರಣ್ಯಕಾಂಡ 24:4,16). ಪರವಶಳಾಗಿ ದೇವದರ್ಶನದಲ್ಲಿರುವಾಗ ಶ್ರೀಮತಿ ವೈಟಮ್ಮನವರು ಉಸಿರಾಡುವುದಿಲ್ಲವೆಂದು ಜೇಮ್ಸ್ ವೈಟ್‍ರವರು ಜನರಿಗೆ ವಿವರಿಸಿದರು. ಅನಂತರ ಅವರು ದಾನಿಯೇಲನು ದರ್ಶನ ನೋಡಿದಾಗ “ಶಕ್ತಿಯನ್ನೆಲ್ಲಾ ಕಳೆದುಕೊಂಡು ನಿತ್ರಾಣನಾದನು” ಎಂಬ ವಾಕ್ಯದ ಕಡೆಗೆ ಜನರ ಗಮನ ಸೆಳೆದರು (ದಾನಿಯೇಲನು 10:8). ಅನಂತರ ಶ್ರೀ ಜೇಮ್ಸ್ ವೈಟ್‍ರವರು ಈ ವಿಷಯದಲ್ಲಿ ಯಾರಿಗಾದರೂ ಸಂಶಯವಿದ್ದಲ್ಲಿ ಬಂದು ಪರೀಕ್ಷಿಸುವಂತೆ ಆಹ್ವಾನಿಸಿದರು. ಯಾರಾದರೂ ವೈದ್ಯರು ಬಂದು ಶ್ರೀಮತಿ ವೈಟಮ್ಮನವರು ದರ್ಶನದಲ್ಲಿರುವಾಗ ಅವರ ಉಸಿರಾಟವನ್ನು ಪರೀಕ್ಷಿಸಿದಲ್ಲಿ ತಮಗೆ ಸಂತೋಷವಾಗುವುದೆಂದೂ ಸಹ ಜೇಮ್ಸ್‍ ವೈಟ್‍ರವರು ಹೇಳಿದರು. KanCCh .0

    ಜನರು ದೇವದರ್ಶನದಲ್ಲಿದ್ದ ಶ್ರೀಮತಿ ವೈಟಮ್ಮನವರ ಬಳಿಗೆ ಬಂದರು. ಅವರು ಉಸಿರಾಡುತ್ತಿರಲಿಲ್ಲ. ಆದರೂ ಹೃದಯ ಬಡಿಯುತ್ತಿತ್ತು ಮತ್ತು ಕೆನ್ನೆಗಳ ಬಣ್ಣವು ಸಹಜವಾಗಿತ್ತು. ಅವರ ಮುಖದ ಮುಂದೆ ಜನರು ಒಂದು ಕನ್ನಡಿ ಹಿಡಿದರು. ಆದರೆ ಕನ್ನಡಿಯಲ್ಲಿ ಯಾವುದೇ ತೇವವಾಗಲಿ ಇಲ್ಲವೆ ಹಬೆಯ ಪಸೆಯಾಗಲಿ (Moisture) ಕಂಡುಬರಲಿಲ್ಲ. ಅನಂತರ ಜನರು ಶ್ರೀಮತಿ ವೈಟಮ್ಮನವರ ಮೂಗಿನ ಪಕ್ಕದಲ್ಲಿ ಒಂದು ಮೇಣದ ಬತ್ತಿ ಹಿಡಿದರು. ಅದರ ಉರಿ ನೇರವಾಗಿತ್ತೇ ಹೊರತು, ಅಲುಗಾಡಲಿಲ್ಲ. ಅವರು ಉಸಿರಾಡದಿರುವುದನ್ನು ಜನರು ನೋಡಿದರು. ಶ್ರೀಮತಿ ವೈಟಮ್ಮನವರು ಎದ್ದು ಆ ಕೊಠಡಿಯಲ್ಲೆಲ್ಲಾ ತಿರುಗಾಡುತ್ತಾ, ತಾವು ಕಾಣುತ್ತಿರುವ ದರ್ಶನವನ್ನು ಸಂಕ್ಷಿಪ್ತವಾಗಿ ನೆರೆದಿದ್ದ ಜನರಿಗೆ ವಿವರಿಸಿದರು. ದಾನಿಯೇಲನಂತೆಯೇ ಅವರು ಮೊದಲು ಶಕ್ತಿ ಕಳೆದುಕೊಂಡು ನಿತ್ರಾಣಗೊಂಡರು. ಆದರೆ ಅನಂತರ ಅವರಿಗೆ ಅಲೌಕಿಕ ಶಕ್ತಿ ಉಂಟಾಯಿತು (ದಾನಿಯೇಲನು 10: 7, 8, 18, 19). KanCCh .0

    ಶ್ರೀಮತಿ ವೈಟಮ್ಮನವರಿಗೆ ಸುಮಾರು ಎರಡು ಗಂಟೆಗಳ ಕಾಲ ದೇವದರ್ಶನ ಉಂಟಾಯಿತು. ಅಷ್ಟು ಸಮಯ ಅವರು ಉಸಿರಾಡಲಿಲ್ಲ. ದರ್ಶನವು ಮುಕ್ತಾಯವಾದಾಗ ಅವರು ದೀರ್ಘವಾಗಿ ಉಸಿರೆಳೆದುಕೊಂಡು, ಒಂದು ನಿಮಿಷ ವಿರಾಮದ ನಂತರ ಮತ್ತೆ ಉಸಿರಾಡಿದರು. ಅನಂತರ ಅವರ ಉಸಿರಾಟ ಸಹಜವಾಯಿತು. ಅದೇ ಸಮಯದಲ್ಲಿ ತಮ್ಮ ಸುತ್ತಲಿದ್ದವರನ್ನು ಗುರುತಿಸಿದ್ದಲ್ಲದೆ, ಏನು ನಡೆಯುತ್ತಿದೆ ಎಂಬುದೂ ಸಹ ಅವರಿಗೆ ಮನವರಿಕೆಯಾಯಿತು. KanCCh .0

    ಶ್ರೀಮತಿ ವೈಟಮ್ಮನವರು ಪರವಶರಾಗಿ ದೇವದರ್ಶನದಲ್ಲಿರುವುದನ್ನು ಹೆಚ್ಚಾಗಿ ನೋಡಿದವರಾದ ಶ್ರೀಮತಿ ಮಾರ್ಥಾ ಅಮಡಾನ್ ಎಂಬುವವರು ಅದರ ಬಗ್ಗೆ ಕೆಳಕಂಡಂತೆ ವಿವರಿಸಿದ್ದಾರೆ : KanCCh .0

    “ದರ್ಶನದಲ್ಲಿ ಶ್ರೀಮತಿ ವೈಟಮ್ಮನವರ ಕಣ್ಣು ತೆರೆದಿತ್ತು. ಉಸಿರಾಟವಿರಲಿಲ್ಲ. ಆದರೆ ಅವರು ದರ್ಶನದಲ್ಲಿ ಕಾಣುತ್ತಿರುವುದನ್ನು ತಮ್ಮ ಕೈಗಳು, ಭುಜ, ತೋಳುಗಳ ಚಲನೆ ವಲನೆಗಳ ಮೂಲಕ ಬಹಳ ಸುಂದರವಾಗಿ ವ್ಯಕ್ತಪಡಿಸುತ್ತಿದ್ದರು. ಬೇರೆಯವರು ಅವರ ಕೈ, ತೋಳುಗಳನ್ನು ಚಲಿಸುವಂತೆ ಮಾಡುವುದು ಅಸಾಧ್ಯವಾಗಿತ್ತು. ಶ್ರೀಮತಿ ವೈಟಮ್ಮನವರು ಪರಲೋಕದ ಅಥವಾ ಈ ಲೋಕದ ದೃಶ್ಯಗಳನ್ನು ನೋಡಿದಾಗ, ಅದಕ್ಕೆ ತಕ್ಕಂತೆ ಅವರು ಏಕಾಂಗಿಯಾಗಿ ಕೆಲವು ಪದಗಳನ್ನು ಹಾಗೂ ವಾಕ್ಯಗಳನ್ನು ವ್ಯಕ್ತಪಡಿಸುತ್ತಿದ್ದರು. ದರ್ಶನ ಕಂಡಾಗ `ಮಹಿಮೆ’ ಎಂಬ ಪದವನ್ನು ಅವರು ಮೊದಲು ಉಪಯೋಗಿಸುತ್ತಿದ್ದರು ಕೆಲವು ವೇಳೆ ಇದೇ ಪದವನ್ನು ತಿರುಗಿ ಹೇಳುತ್ತಿದ್ದರು.KanCCh .0

    “ಶ್ರೀಮತಿ ವೈಟಮ್ಮನವರು ಪರವಶರಾಗಿ ದರ್ಶನದಲ್ಲಿದ್ದಾಗ, ಅವರ ಸುತ್ತಲೂ ಇದ್ದ ಜನರಲ್ಲಿ ಯಾವುದೇ ರೀತಿಯ ಉದ್ವೇಗ ಅಥವಾ ಸಂಭ್ರಮ ಇರುತ್ತಿರಲಿಲ್ಲ. ಅದೊಂದು ಗಂಭೀರವಾದ ದೃಶ್ಯವಾಗಿತ್ತು. ದೇವದರ್ಶನವು ಮುಕ್ತಾಯಗೊಂಡಾಗ, ಪರಲೋಕದ ಬೆಳಕು ಅವರಿಂದ ಮರೆಯಾಗುತ್ತಿತ್ತು. ಅನಂತರ ಅವರು ದೀರ್ಘವಾಗಿ ಉಸಿರೆಳೆದುಕೊಂಡು, ಸಹಜವಾಗಿ ಉಸಿರಾಡಲು ಆರಂಭಿಸಿದಾಗ ಕತ್ತಲು ಎಂದು ಉಚ್ಚರಿಸುತ್ತಿದ್ದರು. ಅಲ್ಲದೆ ಅವರು ಶಕ್ತಿಹೀನರಾಗುತ್ತಿದ್ದರು“.KanCCh .0

    ಈಗ ನಾವು ತಿರುಗಿ ಶ್ರೀಮತಿ ವೈಟಮ್ಮನವರು ಯೌವನಸ್ಥನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದಾಗ, ಎರಡು ಗಂಟೆಗಳ ಕಾಲ ನೋಡಿದ ದರ್ಶನದ ವಿಷಯವಾಗಿ ಗಮನಿಸೋಣ. ಇದರ ಬಗ್ಗೆ ಅವರು ಅನಂತರ “ಹತ್ತುವರ್ಷಗಳ ಹಿಂದೆ ಕ್ರಿಸ್ತನು ಮತ್ತು ಸೈತಾನನ ನಡುವಣ ಮಹಾಹೋರಾಟದ ದೃಶ್ಯಗಳು ಪುನಃ ನನಗೆ ತೋರಿಸಲ್ಪಟ್ಟವು. ಅವುಗಳನ್ನು ಬರೆ ಎಂದು ನನಗೆ ದೇವರು ಹೇಳಿದನು” ಎಂದು ತಿಳಿಸಿದರು. KanCCh .0

    ಅವರು ಕಂಡ ಈ ದರ್ಶನದಲ್ಲಿ ಸ್ವತಃ ತಾನು ಇದ್ದುದ್ದಾಗಿಯೂ ಹಾಗೂ ಎಲ್ಲಾ ದೃಶ್ಯಗಳನ್ನೂ ಅವರು ಕಣ್ಣಾರೆ ನೋಡಿದರು. ಮೊದಲು ಅವರು ಪರಲೋಕದಲ್ಲಿದ್ದಂತೆ ಅನಿಸಿತು. ಅಲ್ಲಿ ಲೂಸಿಫರನು ಪರಲೋಕದಿಂದ ದೊಬ್ಬಲ್ಪಟ್ಟದ್ದನ್ನು ಕಂಡರು. ಅನಂತರ ಈ ಲೋಕದ ಸೃಷ್ಟಿ ಹಾಗೂ ಏದೆನ್ ತೋಟದಲ್ಲಿ ಆದಾಮ ಹವ್ವಳನ್ನು ನೋಡಿದರು. ಸರ್ಪದ ಶೋಧನೆಗೆ ಒಳಗಾಗಿ ತೋಟದಿಂದ ಹೊರದೂಡಲ್ಪಟ್ಟದ್ದನ್ನು ಶ್ರೀಮತಿ ವೈಟಮ್ಮನವರು ಕಂಡರು. ಶೀಘ್ರವಾಗಿ ಒಂದಾದ ನಂತರ ಸತ್ಯವೇದದ ಚರಿತ್ರೆಯು ಮತ್ತೊಂದರಂತೆ ಅವರಿಗೆ ಕಾಣಿಸಿತು. ಇಸ್ರಾಯೇಲ್ಯರ ಪೂರ್ವಿಕರು ಹಾಗೂ ಪ್ರವಾದಿಗಳು, ಕ್ರಿಸ್ತನ ಜೀವನ, ಮರಣ ಹಾಗೂ ಪುನರುತ್ಥಾನ ಮತ್ತು ನಮ್ಮ ಮಹಾಯಾಜಕವಾಗಿ ಆತನು ಮಾಡುತ್ತಿರುವ ಸೇವೆಯ ದೃಶ್ಯವೂ ಸಹ ಅವರಿಗೆ ತೋರಿಸಲ್ಪಟ್ಟವು. KanCCh .0

    ಇದಾದ ನಂತರ ಯೇಸುವಿನ ಶಿಷ್ಯರು ಲೋಕದ ಕಟ್ಟಕಡೆಯವರೆಗೆ ಸುವಾರ್ತೆ ಸಾರಲು ಹೋರಡುವುದು, ಧರ್ಮಭ್ರಷ್ಟತೆ ಹಾಗೂ ಅಂಧಕಾರದ ಯುಗದ ಬಗ್ಗೆಯೂ ದರ್ಶನದಲ್ಲಿ ಶ್ರೀಮತಿ ವೈಟಮ್ಮನವರು ತಿಳಿಸಿದರು. ಅನಂತರ ಮಾರ್ಟಿನ್ ಲೂಥರ್‍ರವರ ಕಾಲದಲ್ಲಿ ನಡೆದ ಮಹಾಧಾರ್ಮಿಕ ಸುಧಾರಣೆ ಹಾಗೂ ಸತ್ಯಕ್ಕೋಸ್ಕರ ತಮ್ಮ ಪ್ರಾಣಗಳನ್ನು ಅಪಾಯಕ್ಕೆ ಗುರಿಮಾಡಿಕೊಂಡ ಗಣ್ಯರಾದ ಸ್ತ್ರೀ-ಪುರುಷರನ್ನು ನೋಡಿದರು. ಅಲ್ಲದೆ 1844 ರಲ್ಲಿ ಪರಲೋಕದಲ್ಲಿ ಆರಂಭವಾದ ಹಾಗೂ ನಮ್ಮ ಕಾಲದವರೆಗಿನ ನ್ಯಾಯವಿಚಾರಣೆಯ ದೃಶ್ಯಗಳೂ ಸಹ ಶ್ರೀಮತಿ ವೈಟಮ್ಮನವರಿಗೆ ತೋರಿಸಲ್ಪಟ್ಟವು. ಇದಾದ ನಂತರ ಕ್ರಿಸ್ತನ ಎರಡನೇ ಬರೋಣ, ಪರಲೋಕದಲ್ಲಿ ಭಕ್ತರು ಸಾವಿರ ವರ್ಷಗಳು ಆತನೊಂದಿಗೆ ಇರುವುದು, ಆ ಸಮಯದಲ್ಲಿ ಸೈತಾನನು ಹಾಗೂ ಅವನ ದೂತರು ಕ್ರಿಸ್ತನ ಬರೋಣದಿಂದ ನಾಶವಾಗಿರುವ ಈ ಲೋಕದಲ್ಲಿ ಬಂಧಿಸಲ್ಪಟ್ಟಿರುವುದು ಹಾಗೂ ನೂತನಾಕಾಶ ಮತ್ತು ನೂತನ ಭೂಮಂಡಲದ ದೃಶ್ಯಗಳೂ ಸಹ ದರ್ಶನದಲ್ಲಿ ಶ್ರೀಮತಿ ವೈಟಮ್ಮನವರಿಗೆ ತೋರಿಸಲ್ಪಟ್ಟವು. KanCCh .0

    ಶ್ರೀಮತಿ ವೈಟಮ್ಮನವರು ತಮ್ಮ ಮನೆಗೆ ಹಿಂದಿರುಗಿದ ನಂತರ ದರ್ಶನದಲ್ಲಿ ನೋಡಿದ ವಿವಿಧ ವಿಷಯಗಳನ್ನು ಬರೆಯಲು ತೊಡಗಿದರು. ಆರುತಿಂಗಳ ನಂತರ ಕ್ರಿಸ್ತನು ಹಾಗೂ ಆತನ ದೂತರು ಮತ್ತು ಸೈತಾನನು ಹಾಗೂ ಅವನ ನಡುವಣ ಮಹಾಹೋರಾಟ ಎಂಬ 219 ಪುಟಗಳ ಪುಸ್ತಕವನ್ನು ಆಂಗ್ಲಭಾಷೆಯಲ್ಲಿ ಅವರು ಬರೆದರು. KanCCh .0

    ಈ ಪುಸ್ತಕವನ್ನು ವಿಶ್ವಾಸಿಗಳು ಅತ್ಯುತ್ಸಾಹದಿಂದ ಸ್ವೀಕರಿಸಿದರು. ಯಾಕೆಂದರೆ ಇದರಲ್ಲಿ ಸಭೆಯ ಅನುಭವ ಮತ್ತು ಕೊನೆಯ ಮಹಾಹೋರಾಟದಲ್ಲಿ ಸೈತಾನನು ಹೇಗೆ ಸಭೆ ಮತ್ತು ಈ ಲೋಕವನ್ನು ತಪ್ಪುದಾರಿಗೆ ಎಳೆಯಲು ಪ್ರಯತ್ನಿಸುತ್ತಾನೆಂದು ಅವನ ಮುಖವಾಡವನ್ನು ಬಯಲು ಮಾಡಲಾಗಿತ್ತು. ದೇವರು ತಾನು ವಾಗ್ದಾನ ಮಾಡಿದಂತೆ, ಈ ಕೊನೆಯಕಾಲದಲ್ಲಿ ಪ್ರವಾದನಾ ಆತ್ಮದ ಮೂಲಕ ಅಡ್ವೆಂಟಿಸ್ಟ್‍ರೊಂದಿಗೆ ಮಾತಾಡುತ್ತಿರುವುದಕ್ಕೆ ನಾವು ಎಷ್ಟೊಂದು ಕೃತಜ್ಞರಾಗಿರಬೇಕಲ್ಲವೇ! KanCCh .0

    “ಸ್ಪಿರಿಚುವಲ್ ಗಿಫ್ಟ್ಸ್” ಎಂಬ ಚಿಕ್ಕ ಪುಸ್ತಕದಲ್ಲಿ ಬಹಳ ಸಂಕ್ಷಿಪ್ತವಾಗಿ ತಿಳಿಸಲ್ಪಟ್ಟ ಮಹಾಹೋರಾಟದ ವಿಷಯಗಳು ಅನಂತರ “ಅರ್ಲಿ ರೈಟಿಂಗ್ಸ್” ಎಂಬ ಪುಸ್ತಕದ ಕೊನೆಯ ಭಾಗದಲ್ಲಿ ತಿರುಗಿ ಮುದ್ರಣಗೊಂಡಿತು. ಆದರೆ ಕಾಲಕ್ರಮೇಣ ಸಭೆಯು ಬೆಳೆದಂತೆ ಕ್ರಿಸ್ತನು ಮತ್ತು ಸೈತಾನನ ನಡುವಣ ಮಹಾಹೋರಾಟವನ್ನು ದೇವರು ಸವಿಸ್ತಾರವಾಗಿ ಅನೇಕ ದರ್ಶನಗಳಲ್ಲಿ ಶ್ರೀಮತಿ ವೈಟಮ್ಮನವರಿಗೆ ತೋರಿಸಿದನು. ಅವುಗಳನ್ನೂ ಸೇರಿಸಿ 1870-1884 ರ ಅವಧಿಯಲ್ಲಿ “ಸ್ಪಿರಿಟ್ ಆಫ್ ಪ್ರಾಫಸಿ” ಎಂದು ನಾಲ್ಕು ಸಂಪುಟಗಳಲ್ಲಿ ತಿರುಗಿ ಅವರು ಬರೆದರು. ಈ ಪುಸ್ತಕಗಳಲ್ಲಿ ಬರೆದಿರುವ ಮಹಾಹೋರಾಟದ ಪ್ರಮುಖ ಭಾಗಗಳನ್ನು `ದಿ ಸ್ಟೋರಿ ಆಫ್ ರಿಡೆಂಪ್ಷನ್” ಪುಸ್ತಕದಲ್ಲಿ ಆರಿಸಿಕೊಂಡು ಪ್ರಕಟಿಸಲಾಗಿದೆ. ಅನೇಕ ಭಾಷೆಗಳಲ್ಲಿ ಪ್ರಕಟಗೊಂಡಿರುವ ಈ ಪುಸ್ತಕದಲ್ಲಿ ಶ್ರೀಮತಿ ವೈಟಮ್ಮನವರು ಮಹಾಹೋರಾಟದ ಬಗ್ಗೆ ದರ್ಶನದಲ್ಲಿ ನೋಡಿದ ವಿಷಯಗಳನ್ನು ತಿಳಿಸಲಾಗಿದೆ. ಒಳ್ಳೆಯದು ಮತ್ತು ಕೆಟ್ಟದ್ದರ ನಡುವಣ ಮಹಾಹೋರಾಟದ ಸಂಪೂರ್ಣ ಚರಿತ್ರೆಯ ಒಂದೊಂದು ವಿಷಯವನ್ನು ಸಂಪೂರ್ಣವಾಗಿ ಶ್ರೀಮತಿ ವೈಟಮ್ಮನವರು ಬರೆದ ಪೇಟ್ರಿಯಾರ್ಕ್ಸ್ ಅಂಡ್ ಪ್ರಾಫೆಟ್ಸ್ ಅಂಡ್ ಕಿಂಗ್ಸ್, ದಿ ಡಿಸೈರ್ ಆಫ್ ಏಜಸ್, ದಿ ಆಕ್ಟ್ಸ್ ಆಫ್ ದಿ ಅಫೋಸ್ತಲ್ಸ್ ಹಾಗೂ ದಿ ಗ್ರೇಟ್ ಕಾಂಟ್ರೊವರ್ಸಿ ಎಂಬ ಐದು ಸಂಪುಟಗಳಲ್ಲಿ ವಿವರಿಸಲಾಗಿದೆ. KanCCh .0

    ಈ ಸಂಪುಟಗಳು ಸತ್ಯವೇದದಲ್ಲಿ ತಿಳಿಸಿರುವಂತೆ ಈ ಲೋಕದ ಸೃಷ್ಟಿಯಿಂದ ಹಿಡಿದು, ಕ್ರೈಸ್ತಧರ್ಮದ ಕಾಲ ಹಾಗೂ ಲೋಕದ ಅಂತ್ಯದವರೆಗೆ ನಮಗೆ ಹೆಚ್ಚಿನ ದೈವೀಕ ಬೆಳಕು ಮತ್ತು ಉತ್ತೇಜನ ಕೊಡುತ್ತವೆ. ಇವು ಸೆವೆಂತ್ ಡೇ ಅಡ್ವೆಂಟಿಸ್ಟ್ ಕ್ರೈಸ್ತರಾದ ನಮ್ಮನ್ನು `ಬೆಳಕಿನ ಮಕ್ಕಳು’ ಎಂದು ಗುರುತಿಸುವುದಕ್ಕೆ ಸಹಾಯಕವಾಗಿವೆ. ಈ ಅನುಭವದಲ್ಲಿ ನಾವು “ಕರ್ತನಾದ ಯೆಹೋವನು ತನ್ನ ಸೇವಕರಾದ ಪ್ರವಾದಿಗಳಿಗೆ ತನ್ನ ರಹಸ್ಯವನ್ನು ತಿಳಿಸದೆ ಏನೂ ಮಾಡನು” ಎಂಬ ವಾಗ್ದಾನದ ನೆರವೇರುವಿಕೆಯನ್ನು ನೋಡಬಹುದು (ಆಮೋಸ 3:7). KanCCh .0

    ದೇವದರ್ಶನದ ಮೂಲಕ ಈ ದೈವೀಕ ಬೆಳಕು ತನಗೆ ಹೇಗೆ ಬಂದಿತೆಂಬುದರ ಬಗ್ಗೆ ಶ್ರೀಮತಿ ವೈಟಮ್ಮನವರು ಹೀಗೆ ಹೇಳುತ್ತಾರೆ KanCCh .0

    “ಪರಿಶುದ್ಧಾತ್ಮನ ಪ್ರೇರಣೆಯ ಮೂಲಕ ದೀರ್ಘಕಾಲದಿಂದ ಮುಂದುವರಿಯುತ್ತಿರುವ ಒಳ್ಳೇದರ ಮತ್ತು ಕೆಟ್ಟದ್ದರ ನಡುವಣ ಮಹಾ ಹೋರಾಟದ ದೃಶ್ಯವು ನನಗೆ ತೋರಿಸಲ್ಪಟ್ಟವು. ಕಾಲಾಂತರದಲ್ಲಿ ವಿವಿಧ ಸಮಯಗಳಲ್ಲಿ ನಮ್ಮ ರಕ್ಷಣೆಯ ಮೂಲಕರ್ತನೂ, ಜೀವದಾಯಕನೂ ಆದ ಯೇಸುಕ್ರಿಸ್ತನು ಮತ್ತು ಅಂಧಕಾರದ ಅಧಿಪತಿಯೂ, ಪಾಪದ ಮೂಲನೂ ಮತ್ತು ದೇವರ ಪರಿಶುದ್ಧ ಆಜ್ಞೆಗಳನ್ನುಮೊದಲು ಉಲ್ಲಂಘಿಸಿದವನೂ ಆದ ಸೈತಾನನ ನಡುವೆ ನಡೆಯುತ್ತಿರುವ ಮಹಾಹೋರಾಟದ ದೃಶ್ಯಗಳು ನನಗೆ ಕಂಡುಬಂದವು. ದೇವರಾತ್ಮನು ತನ್ನ ವಾಕ್ಯದಲ್ಲಿರುವ ಮಹಾಸತ್ಯಗಳನ್ನು ಮತ್ತು ಹಿಂದಿನ ಹಾಗೂ ಮುಂದಿನ ದೃಶ್ಯಗಳನ್ನು ನನಗೆ ತೋರಿಸಿ, ಇವುಗಳನ್ನು ಬರೆಯುವಂತೆ ಆದೇಶ ನೀಡಲಾಯಿತು“.KanCCh .0