Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ದೈವಭಕ್ತಿಯುಳ್ಳ ತಂದೆ-ತಾಯಿಯರ ಹಿತವಚನಗಳು

    ಮದುವೆಯಿಂದ ಅನೇಕ ಕಷ್ಟ ಸಂಕಟಗಳು ಸಂಭವಿಸುತ್ತಿರುವಾಗ, ಯೌವನಸ್ಥರು ಯಾಕೆ ವಿವೇಕಿಗಳಾಗಬಾರದು? ಅನುಭವಶಾಲಿಗಳು ಹಾಗೂ ಹಿರಿಯರ ಹಿತವಚನಗಳ ಅಗತ್ಯ ತಮಗಿಲ್ಲವೆಂದು ಯಾಕೆ ಅವರು ಯಾವಾಗಲೂ ಭಾವಿಸುತ್ತಾರೆ? ವ್ಯಾಪಾರ, ವ್ಯವಹಾರದಲ್ಲಿ ಜನರು ಹೆಚ್ಚಿನ ಎಚ್ಚರಿಕೆ ವಹಿಸುತ್ತಾರೆ. ಯಾವುದಾದರೂ ಪ್ರಮುಖವಾದ ಉದ್ಯಮದಲ್ಲಿ ತೊಡಗಿಸಿಕೊಳ್ಳುವುದಕ್ಕೆ ಮೊದಲು ಅವರು ಅದಕ್ಕಾಗಿ ಸಾಕಷ್ಟು ಮುಂಜಾಗ್ರತೆಯಿಂದ ಸಿದ್ಧತೆ ಮಾಡಿಕೊಳ್ಳುತ್ತಾರೆ. ತಾವು ತೊಡಗಿಸಿಕೊಳ್ಳುವ ಉದ್ಯಮದಲ್ಲಿ ನಷ್ಟವುಂಟಾಗದಂತೆ ತಡೆಯಲು ತಮ್ಮ ಸಮಯ, ಹಣ ಮತ್ತು ಎಚ್ಚರಿಕೆಯಿಂದ ಕೂಲಂಕುಶವಾಗಿ ಅದರ ಬಗ್ಗೆ ಸಮಾಲೋಚನೆ ನಡೆಸುತ್ತಾರೆ.KanCCh 122.3

    ಲೌಕಿಕವಾದ ವ್ಯಾಪಾರ ಉದ್ದಿಮೆಯಲ್ಲಿ ಇಷ್ಟೊಂದು ಎಚ್ಚರಿಕೆ ವಹಿಸುವಾಗ, ಮುಂದಿನ ಸಂತತಿಗಳು ಮತ್ತು ಭವಿಷ್ಯದ ಜೀವನದ ಮೇಲೆ ಪರಿಣಾಮ ಬೀರಲಿರುವ ಮದುವೆಯ ಸಂಬಂಧಕ್ಕೆ ಮೊದಲು, ಇನ್ನಷ್ಟು ಹೆಚ್ಚಿನ ಎಚ್ಚರಿಕೆ ವಹಿಸಬೇಕಲ್ಲವೇ? ಬದಲಾಗಿ ಅನೇಕ ಸಂದರ್ಭಗಳಲ್ಲಿ ತಮಾಷೆಗಾಗಿ, ಲೈಂಗಿಕ ಕಾಮುಕತೆಯಿಂದ, ಕುರುಡು ವ್ಯಾಮೋಹದಿಂದ ಮತ್ತು ತತ್ಕ್ಷಣದ ಯಾವುದೋ ಪ್ರಚೋದನೆಯಿಂದ ಯುವಕ ಯುವತಿಯರು ಮದುವೆಯ ಬಂಧನಕ್ಕೆ ಒಳಗಾಗುತ್ತಾರೆ. ಶಾಂತವಾಗಿ ಕುಳಿತು ಆಲೋಚಿಸುವುದಿಲ್ಲ. ಸೈತಾನನು ಈ ಲೋಕದಲ್ಲಿ ಜನರು ಕಷ್ಟ ದುಃಖಗಳಿಗೆ ಒಳಗಾಗಬೇಕು ಮತ್ತು ಲೋಕವನ್ನು ನಾಶ ಮಾಡಬೇಕೆಂದು ಅವರು ಇಷ್ಟಪಡುವುದೇ ಇದಕ್ಕೆ ಕಾರಣ. ಜನರನ್ನು ಇಂತಹ ಬಲೆಗೆ ಸಿಲುಕಿಸಲು ಸೈತಾನನು ಎಲ್ಲಾ ಪ್ರಯತ್ನ ಮಾಡುತ್ತಾನೆ. ಹಿರಿಯರ, ತಂದೆ-ತಾಯಿಯರ ಹಿತವಚನ, ಸಲಹೆಗಳನ್ನು ತಿರಸ್ಕರಿಸಿ, ತಮ್ಮದೇ ಆದ ವ್ಯಾಮೋಹ, ಕಾಮುಕತನದಿಂದ ಯಾವುದೇ ಮುಂದಾಲೋಚನೆಯಿಲ್ಲದೆ ದಾಂಪತ್ಯಕ್ಕೊಳಗಾದವರು ಈ ಲೋಕದಲ್ಲಿ ಸಂತೋಷ ಮತ್ತು ಮುಂದೆ ಪರಲೋಕವನ್ನು ಕಳೆದುಕೊಳ್ಳುವುದನ್ನು ನೋಡುವುದು ಸೈತಾನನಿಗೆ ಹೆಚ್ಚಿನ ಆನಂದ ತರುತ್ತದೆ.KanCCh 123.1

    ಕೆಲವು ಯೌವನಸ್ಥರು ತಮ್ಮ ತಂದೆ-ತಾಯಿಯರ ಸಲಹೆ, ಹಿತವಚನಗಳು ಹೊರತಾಗಿಯೂ, ತಮ್ಮದೇ ಆದ ಬಯಕೆಗಳು, ಇಷ್ಟದಂತೆ ನಡೆಯುವರೇ? ಕೆಲವರು ತಂದೆ-ತಾಯಿಯರ ಸಲಹೆ ಹಾಗೂ ಪರಿಪಕ್ವವಾದ ನಿರ್ಣಯಕ್ಕೆ ವಿರುದ್ಧವಾಗಿ ನಡೆಯುತ್ತಾರೆ. ಕಾಮಾಭಿಲಾಷೆ ಮತ್ತು ಸ್ವಾರ್ಥದಿಂದ ಅವರ ಹೃದಯದ ಬಾಗಿಲು ಮುಚ್ಚಲ್ಪಟ್ಟಿರುತ್ತದೆ. ಈ ವಿಷಯದಲ್ಲಿ ಯುವಕರನ್ನು ಬಡಿದೆಬ್ಬಿಸಬೇಕಾದ ಅಗತ್ಯವಿದೆ. ನಿನ್ನ ತಂದೆ-ತಾಯಿಯರನ್ನು ಸನ್ಮಾನಿಸು ಎಂಬ ಐದನೇ ಆಜ್ಞೆಯು ಮಾತ್ರ ವಾಗ್ದಾನ ಪೂರ್ವಕವಾದ ಏಕೈಕ ಆಜ್ಞೆಯಾಗಿದೆ. ಆದರೆ ಯೌವನಸ್ಥರು ಅದನ್ನು ಗಂಭೀರವಾಗಿ ಎಣಿಸುವುದಿಲ್ಲ. ತಾಯಿಯ ಪ್ರೀತಿಯನ್ನು ಕಡೆಗಣಿಸುವುದು ಹಾಗೂ ತಂದೆಯ ಕಾಳಜಿಯನ್ನು ಅಗೌರವಿಸುವುದು ಪಾಪವಾಗಿದೆ. ಅನೇಕ ಯುವಕ/ ಯುವತಿಯರು ಇಂತಹ ಪಾಪಕ್ಕೆ ಒಳಗಾಗಿದ್ದಾರೆ.KanCCh 123.2

    ವಿವಾಹಕ್ಕೆ ಸಂಬಂಧಿಸಿದಂತೆ ಅನನುಭವಿಗಳಾದ ಯೌವನಸ್ಥರ ಪ್ರೀತಿಗೆ ತೊಂದರೆ ಕೊಡಬಾರದು ಹಾಗೂ ಅದರಲ್ಲಿ ತಲೆಹಾಕಬಾರದು ಎಂಬ ಅಭಿಪ್ರಾಯ ಅನೇಕರಲ್ಲಿದೆ. ಇದು ಅತ್ಯಂತ ತಪ್ಪು ಅಭಿಪ್ರಾಯವಾಗಿದೆ. ಬೇರೆ ಯಾವುದೇ ವಿಷಯಗಳಿಗಿಂತಲೂ, ಮದುವೆಯ ವಿಷಯವನ್ನು ಎಲ್ಲಾ ದೃಷ್ಟಿಕೋನದಿಂದಲೂ ವಿಮರ್ಶಿಸಬೇಕಾಗಿದೆ. ಅನುಭವಿಗಳಾದ ಇತರರ ಸಹಾಯ ಮತ್ತು ಯುವಕ, ಯುವತಿ- ಈ ಇಬ್ಬರ ಮನೆಯವರು ಮದುವೆಯ ವಿಷಯದಲ್ಲಿ ಸಮಾಧಾನದಿಂದ ಎಲ್ಲಾ ವಿಷಯಗಳ ಬಗ್ಗೆ ಚರ್ಚಿಸುವುದು ಅತ್ಯಗತ್ಯ. ಆದರೆ ಈ ವಿಷಯದಲ್ಲಿ ಅತೀ ಹೆಚ್ಚು ಜನರು ಬಹಳ ಹಗುರವಾಗಿ ಎಣಿಸುತ್ತಾರೆ. ಯುವಸ್ನೇಹಿತರೇ, ದೇವರು ಮತ್ತು ದೈವಭಕ್ತಿಯುಳ್ಳ ನಿಮ್ಮ ತಂದೆ-ತಾಯಿಯರ ಹಿತವಚನ ಹಾಗೂ ಸಲಹೆಗಳನ್ನು ಗೌರವಿಸಬೇಕು. ಮದುವೆಯ ವಿಷಯದ ಬಗ್ಗೆ ಹೆಚ್ಚಿನ ಪ್ರಾರ್ಥನೆ ಮಾಡಬೇಕು.KanCCh 123.3

    ತಂದೆ-ತಾಯಿಗಳು ಮಗ ಅಥವಾ ಮಗಳ ಭಾವನೆಗೆ ಬೆಲೆ ಕೊಡದೆ ಅಥವಾ ಅವರ ಮನಸ್ಸನ್ನು ಅರ್ಥ ಮಾಡಿಕೊಳ್ಳದೆ ಸಂಗಾತಿಯನ್ನು ಆರಿಸಬಹುದೇ? ಎಂದು ಯೌವನಸ್ಥರಾದ ನೀವು ಪ್ರಶ್ನಿಸಬಹುದು. ಇದಕ್ಕೆ ಶ್ರೀಮತಿ ವೈಟಮ್ಮನವರು ಯುವಕ ಯುವತಿಯರಿಗೆ ಮತ್ತೊಂದು ಪ್ರಶ್ನೆ ಕೇಳುತ್ತಾರೆ. ತಂದೆತಾಯಿಯರು ನಿಮ್ಮ ಮೇಲೆ ಅಪಾರ ಪ್ರೀತಿ ಇಟ್ಟಿರುವಾಗ ನಿಮ್ಮ ಮದುವೆಯು ಅವರ ಸಂತೋಷವನ್ನು ಹಾಳು ಮಾಡುವಂತಿದ್ದರೆ, ಯೌವನಸ್ಥರಾದ ನೀವು ಮೊದಲು ಅವರ ಸಲಹೆ ಪಡೆದುಕೊಳ್ಳದೆ ನಿಮ್ಮ ಸಂಗಾತಿಯನ್ನು ಆರಿಸಿಕೊಳ್ಳಬಹುದೆ? ಅಂತಹ ಮಕ್ಕಳು ತಮ್ಮ ತಂದೆ-ತಾಯಿಯರ ಸಲಹೆ ಮೀರಿ, ಅವರ ದೈನ್ಯದ ಬೇಡಿಕೆಯನ್ನು ತಿರಸ್ಕರಿಸಿ, ತಮ್ಮಿಚ್ಛೆಯಂತೆ ನಡೆಯಬಹುದೇ? ನೀವು ಎಂದಿಗೂ ಮದುವೆಯಾಗದಿದ್ದರೂ ಸರಿಯೇ, ಈ ವಿಷಯದಲ್ಲಿ ನಿಮ್ಮ ತಂದೆ- ತಾಯಿಯರ ಹಿತವಚನ ಹಾಗೂ ಬೇಡಿಕೆಗೆ ವಿರುದ್ಧವಾಗಿ ಹೋಗಬಾರದು. “ನಿನ್ನ ತಂದೆ-ತಾಯಿಗಳನ್ನು ಸನ್ಮಾನಿಸಬೇಕು. ಸನ್ಮಾನಿಸಿದರೆ ನಿನ್ನ ದೇವರಾದ ಯೆಹೋವನು ನಿನಗೆ ಅನುಗ್ರಹಿಸುವ ದೇಶದಲ್ಲಿ ನೀನು ಬಹುಕಾಲ ಇರುವಿ” (ವಿಮೋಚನಕಾಂಡ 20:12). ಈ ಆಜ್ಞೆಯಲ್ಲಿ ದೇವರು ಒಂದು ವಾಗ್ದಾನ ಮಾಡಿದ್ದಾನೆ. ಹಾಗೂ ಇದನ್ನು ಕೈಕೊಂಡು ನಡೆಯುವವರಿಗೆ ಖಂಡಿತವಾಗಿಯೂ ತನ್ನ ವಾಗ್ದಾನವನ್ನು ನೆರವೇರಿಸುತ್ತಾನೆ. ಅದೇ ಸಂದರ್ಭದಲ್ಲಿ ವಿವೇಕವುಳ್ಳ ತಂದೆ-ತಾಯಿಯರು ತಮ್ಮ ಮಕ್ಕಳ ಅಭಿಪ್ರಾಯಕ್ಕೆ ವಿರುದ್ಧವಾಗಿ ಅವರಿಗೆ ಸಂಗಾತಿಗಳನ್ನು ಆರಿಸುವುದಿಲ್ಲ.KanCCh 124.1

    ತಮ್ಮ ಮಕ್ಕಳ ಪ್ರೀತಿಯು ಮುಂದೆ ಬರಲಿರುವ ಅವರ ಸೂಕ್ತವಾದ ಸಂಗಾತಿಗೆ ಮೀಸಲಾಗಿಡಬೇಕೆಂದು ಮಾರ್ಗದರ್ಶನ ನೀಡುವುದು ತಂದೆ-ತಾಯಿಯರ ಪರಂಪರಾಗತ ಕರ್ತವ್ಯವಾಗಿದೆ. ತಮ್ಮ ಹಿತವಚನ ಹಾಗೂ ಉದಾಹರಣೆ ಮತ್ತು ದೇವರ ಕೃಪೆಯಿಂದ ಚಿಕ್ಕಂದಿನಿಂದಲೂ ತಮ್ಮ ಮಕ್ಕಳ ಶೀಲಸ್ವಭಾವವನ್ನು ಪೋಷಿಸಿ, ಅವರು ಒಳ್ಳೆಯದು ಹಾಗೂ ಸತ್ಯವನ್ನು ಮಾತ್ರ ಅನುಸರಿಸುವಂತಹ ಪರಿಶುದ್ಧರೂ, ಉದಾತ್ತ ಗುಣವುಳ್ಳವರೂ ಆಗುವಂತೆ ಬೆಳೆಸುವುದು ತಂದೆ-ತಾಯಿಯರ ಪ್ರಮುಖ ಕರ್ತವ್ಯವಾಗಿದೆ. ಅಭಿರುಚಿಯು ಅಭಿರುಚಿಯನ್ನು ಆಕರ್ಷಿಸುತ್ತದೆ ಹಾಗೂ ಮೆಚ್ಚುಗೆ ವ್ಯಕ್ತ ಪಡಿಸುತ್ತದೆ. ಸತ್ಯ, ಪರಿಶುದ್ಧತೆ, ಒಳ್ಳೇತನಗಳ ಬಗ್ಗೆ ಮಕ್ಕಳಲ್ಲಿ ಬಾಲ್ಯದಿಂದಲೇ ಪ್ರೀತಿ ಉಂಟಾಗಲಿ. ಇಂತಹ ಉದಾತ್ತ ಸ್ವಭಾವ ಹೊಂದಿರುವಂತವರ ಸಹವಾಸವನ್ನು ಯೌವನಸ್ಥರು ಮಾಡಲಿ.KanCCh 124.2